ರಾಜ್ಯ

2021ರಲ್ಲಿ ಬಳ್ಳಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 180 ಮಂದಿ ಸಾವು: ಗಣಿ ಲಾರಿಗಳು, ಹದಗೆಟ್ಟ ರಸ್ತೆಗಳು ಕಾರಣ!

Lingaraj Badiger

ಬಳ್ಳಾರಿ: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 2021 ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಬರೋಬ್ಬರಿ 180 ಮಂದಿ ಮೃತಪಟ್ಟಿದ್ದಾರೆ ಮತ್ತು ಗಣಿಗಾರಿಕೆ ಲಾರಿಗಳಿಂದ ಹೆಚ್ಚು ಅಪಘಾತಗಳು ಸಂಭವಿಸಿವೆ. ಕಳೆದ ವರ್ಷ ಲಾಕ್‌ಡೌನ್‌ ನಿಂದ ಗಣಿ ಉದ್ಯಮವು ನಿಧಾನಗತಿಯಲ್ಲಿದ್ದಾಗಲೂ ಅಪಘಾತದಲ್ಲಿ 110 ಸಾವುಗಳು ವರದಿಯಾಗಿವೆ.

ಈ ಜಿಲ್ಲೆಗಳಲ್ಲಿ ಸುಮಾರು 5,000 ಟ್ರಕ್‌ಗಳು ಗಣಿಗಾರಿಕೆ ಉತ್ಪನ್ನಗಳನ್ನು ಸಾಗಿಸುತ್ತವೆ. ಭಾರೀ ವಾಹನಗಳ ಸಂಚಾರದಿಂದ ರಸ್ತೆಯ ಸ್ಥಿತಿಯೂ ಹಾಳಾಗಿದ್ದು, ಮತ್ತಷ್ಟು ಅಪಘಾತಗಳಿಗೆ ಕಾರವಾಗಿದೆ. ಅಂಕಿಅಂಶಗಳ ಪ್ರಕಾರ, ಈ ವರ್ಷ ಸಾವನ್ನಪ್ಪಿದ 180 ಜನರಲ್ಲಿ 110 ಜನರು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳಾಗಿದ್ದಾರೆ.

ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ಭರತ್ ರೆಡ್ಡಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 1,650 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. "ಬಳ್ಳಾರಿ ಜಿಲ್ಲೆಯಲ್ಲಿ ಪ್ರಮುಖ ಗಣಿಗಾರಿಕೆ ಘಟಕಗಳು ಇರುವುದರಿಂದ ಗಣಿಗಾರಿಕೆ ಟ್ರಕ್‌ಗಳ ಸಂಚಾರ ಹೆಚ್ಚಾಗಿದೆ. ಕಳೆದ ವರ್ಷ ಸಾಂಕ್ರಾಮಿಕ ಲಾಕ್‌ಡೌನ್‌ನಿಂದಾಗಿ ವಾಹನಗಳ ಸಂಖ್ಯೆ ಕಡಿಮೆಯಾಗಿತ್ತು" ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿ ಮತ್ತು ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಹಾಗೂ ಸಂಡೂರಿನಿಂದ ಬಳ್ಳಾರಿ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಹೊಸಪೇಟೆ ಹಾಗೂ ಬಳ್ಳಾರಿ ಎನ್‌ಎಚ್ 67 ಕಾಮಗಾರಿ ಅಪೂರ್ಣವಾಗಿದ್ದು, ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ನಿವಾಸಿಗಳು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಗಣಿಗಾರಿಕೆ ಟ್ರಕ್‌ಗಳ ದುಡುಕಿನ ಚಾಲನೆಯಿಂದಾಗಿ ಅನೇಕ ಪಾದಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

SCROLL FOR NEXT