ರಾಜ್ಯ

ಹೀರೇಬಾಗೆವಾಡಿಯಲ್ಲಿ ಭೀಕರ ರಸ್ತೆ ಅಪಘಾತ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಮೂವರ ದುರ್ಮರಣ, ಇಬ್ಬರಿಗೆ ಗಾಯ

Shilpa D

ಬೆಳಗಾವಿ: ನಿಂತಿದ್ದ ಲಾರಿಗೆ ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ದುರ್ಘಟನೆ ಸಂಭವಿಸಿದೆ.

ಮೃತರು ಧಾರವಾಡದಿಂದ ಬೆಳಗಾವಿಗೆ ಹೊರಟ್ಟಿದ್ದರು, ಯಲ್ಲಾಪುರದ ಚರ್ಚ್ ರಸ್ತೆ ನಿವಾಸಿ ಸೈಯ್ಯದ್ ಇಸ್ಮಾಯಿಲ್ ದಾವೂದ್ (64), ಬೆಳಗಾವಿಯ ಲಕ್ಷ್ಮೀಟೆಕ್ ಸೈನಿಕ ನಗರದ ನಿವಾಸಿ ಸುಶೀಲಾ ಡಿಕೋಸ್ತಾ (73), ಯಲ್ಲಾಪುರದ ಕಾಳಮ್ಮ ನಗರದ ನಿವಾಸಿ ವಾಸಿಂ ಹುಸೇನ್ ಖಾನ್ (35) ಮೃತರಾಗಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಯಲ್ಲಾಪುರದ ಚರ್ಚ್ ರಸ್ತೆಯ ನಿವಾಸಿ ಜಾವೀದ್ ದಾವೂದ್ (41) ಮತ್ತು ಯಲ್ಲಾಪುರದ ಚರ್ಚ್ ರಸ್ತೆಯ ಮುಕ್ತಿಯಾರ್ ಯೂಸುಫ್ ಸೈಯ್ಯದ್ (46) ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ಮೃತರು ಧಾರವಾಡದಿಂದ ಬೆಳಗಾವಿಗೆ ಕಾರಿನಲ್ಲಿ ತೆರಳುತ್ತಿದ್ದರು. ಆದರೆ ರಾಷ್ಟ್ರೀಯ ಹೆದ್ದಾರಿ-4ರ ಹಿರೇ ಬಾಗೇವಾಡಿ ಗ್ರಾಮದ ವೀರಪನ ಕೊಪ್ಪದ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಅವರು ಪ್ರಯಾಣಿಸುತ್ತಿದ್ದ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಹಿರೇ ಬಾಗೇವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

SCROLL FOR NEXT