ರಾಜ್ಯ

ಪ್ರತಿಪಕ್ಷಗಳ ನಡವಳಿಕೆಯಿಂದ ನೋವಾಗಿ ರಾಜೀನಾಮೆಗೆ ಮುಂದಾಗಿದ್ದೆ: ಸಭಾಪತಿ ಬಸವರಾಜ ಹೊರಟ್ಟಿ

Manjula VN

ಹುಬ್ಬಳ್ಳಿ: ಪರಿಷತ್‌ನಲ್ಲಿ ಶುಕ್ರವಾರ ಪ್ರತಿಪಕ್ಷಗಳು ನಡೆದುಕೊಂಡ ರೀತಿ ನನಗೆ ನೋವುಂಟು ಮಾಡಿತ್ತು. ಹೀಗಾಗಿ, ರಾಜೀನಾಮೆಗೆ ಮುಂದಾಗಿದ್ದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್‌ನಲ್ಲಿ ನಿನ್ನೆ ಪ್ರತಿಪಕ್ಷಗಳು ನಡೆದುಕೊಂಡ ರೀತಿ ನನಗೆ ನೋವುಂಟು ಮಾಡಿತ್ತು. ಹೀಗಾಗಿ, ರಾಜೀನಾಮೆಗೆ ಮುಂದಾಗಿದ್ದೆ. ಕಡೆಗೆ ಪ್ರತಿಪಕ್ಷಗಳ ನಾಯಕರು ನನ್ನನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದರು ಎಂದು ಹೇಳಿದ್ದಾರೆ.

ಸದನದಲ್ಲಿ 3 ಗಂಟೆಗೆ ಬೆಲ್ ಆಗಬೇಕಿತ್ತು. ಆದರೆ, ಮೂರೂವರೆಯಾದರೂ ಆಗಲಿಲ್ಲ. ನನಗೂ ಅತ್ತ ಲಕ್ಷ್ಯವಿರಲಿಲ್ಲ. ಮತಾಂತರ ನಿಷೇಧ ಮಸೂದೆಗೆ ಅವಕಾಶ ನೀಡಲು ಸಭಾಪತಿ ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದವರು ಮನಸ್ಸಿಗೆ ಬಂದಂತೆ ಕೂಗಾಡಿದರು. ಇದರಿಂದ ನನಗೆ ನೋವಾಯಿತು. ಬಳಿಕ ಪ್ರತಿಪಕ್ಷದವರು ಕ್ಷಮೆ ಕೋರಿದರು. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕುರಿತು ಈ ಬಾರಿ ಪರಿಷತ್‌ನಲ್ಲಿ ಉತ್ತಮ ಚರ್ಚೆ ನಡೆದಿದೆ. ಹನ್ನೊಂದುವರೆ ತಾಸು ಚರ್ಚೆ ನಡೆಸಲಾಗಿದೆ. ಮೂರು ತಾಸು ಉತ್ತರ ನೀಡಲಾಗಿದೆ. ದಕ್ಷಿಣ ಕರ್ನಾಟಕದವರೇ ಉತ್ತರ ಕರ್ನಾಟಕದ ಬಗ್ಗೆ ಹೆಚ್ಚು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

SCROLL FOR NEXT