ರಾಜ್ಯ

ದೇಶಾದ್ಯಂತ ನಾಳೆ ಕೋವಿಡ್-19 ಲಸಿಕೆ ಅಭಿಯಾನ: ಕರ್ನಾಟಕದಲ್ಲಿ ಮೊದಲು ನೈರ್ಮಲ್ಯ ವಲಯ, ಗ್ರೂಪ್ ಡಿ ನೌಕರರಿಗೆ ಲಸಿಕೆ 

Sumana Upadhyaya

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ನಾಳೆ ಮೊದಲ ಹಂತದ ಕೋವಿಡ್-19 ಲಸಿಕೆ ಅಭಿಯಾನ ಆರಂಭವಾಗಲಿದೆ. ನಾಳೆ ಉದ್ಘಾಟನೆ ದಿನದಂದು ನೈರ್ಮಲ್ಯ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು, ಗ್ರೂಪ್ ಡಿ ನೌಕರರಿಗೆ ಲಸಿಕೆ ಹಾಕಲಾಗುತ್ತದೆ. ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಸೇವಕರನ್ನು ಗಮನದಲ್ಲಿಟ್ಟುಕೊಂಡು ಅವರ ಆರೋಗ್ಯ ದೃಷ್ಟಿಯಿಂದ ಅವರಿಗೆ ಮೊದಲ ಹಂತದಲ್ಲಿ ಲಸಿಕೆ ಪೂರೈಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಜಿಲ್ಲಾ ಆಯುಕ್ತರ ಜೊತೆ ಮೊನ್ನೆ 13ರಂದು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 20 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯ ಸೇವೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಲಸಿಕೆ ಹಾಕಿಸಿಕೊಳ್ಳುವ ಸೌಲಭ್ಯದಲ್ಲಿ ಸೇರ್ಪಡೆಯಾಗಲಿದ್ದಾರೆ.

ಆರೋಗ್ಯ ಸೇವೆಯಲ್ಲಿ ಕೆಲಸ ಮಾಡುವವರಿಗೆ ನಾಳೆ ಉದ್ಘಾಟನೆ ದಿನ ಲಸಿಕೆ ಹಾಕಿಸಲಾಗುತ್ತದೆ. ನಾಳೆ ಪ್ರತಿ ಆರೋಗ್ಯ ಕೇಂದ್ರದಲ್ಲಿ ಗರಿಷ್ಠ 100 ಮಂದಿಯವರೆಗೆ ಲಸಿಕೆ ಹಾಕಬಹುದು. ಆರೋಗ್ಯ ಕೇಂದ್ರದಲ್ಲಿ ಲಸಿಕೆ ಸೌಲಭ್ಯಕ್ಕೆ ಒಳಪಡುವ ಫಲಾನುಭವಿಗಳ ಹೆಸರು, ಹುದ್ದೆಗಳನ್ನು ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ನೀಡಬೇಕಾಗುತ್ತದೆ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ ಎಂದು ಪಾಂಡೆ ತಿಳಿಸಿದರು.

ಆರೋಗ್ಯ ವಲಯ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು 9 ವಿಭಾಗಗಳನ್ನಾಗಿ ವರ್ಗಾಯಿಸಲಾಗಿದೆ. ಅವರಲ್ಲಿ ಮುಂಚೂಣಿ ವಲಯದಲ್ಲಿ ಕೆಲಸ ಮಾಡುವವರು, ಐಸಿಡಿಎಸ್ ಕಾರ್ಮಿಕರು, ನರ್ಸ್ ಗಳು, ಸೂಪರ್ ವೈಸರ್ ಗಳು, ವೈದ್ಯಕೀಯ ಅಧಿಕಾರಿಗಳು, ಅರೆ ವೈದ್ಯಕೀಯ ಸಿಬ್ಬಂದಿ, ಸಪೋರ್ಟ್ ಸ್ಟಾಫ್, ವಿದ್ಯಾರ್ಥಿಗಳು, ವಿಜ್ಞಾನಿಗಳು, ಸಂಶೋಧಕ ಸಿಬ್ಬಂದಿ, ಕ್ಲರ್ಕ್ ಗಳು, ಆಡಳಿತಾತ್ಮಕ ಸಿಬ್ಬಂದಿ ಮತ್ತು ಇತರ ಆರೋಗ್ಯ ಸೇವಾ ಕಾರ್ಯಕರ್ತರು ಒಳಗೊಳ್ಳುತ್ತಾರೆ. 

SCROLL FOR NEXT