ಬೆಂಗಳೂರು: ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದ ಕರ್ನಾಟಕ ಟೊಮೆಟೋ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದು, ಕೋಲಾರದ ಟೊಮೆಟೊ ಬೆಳೆ ಇದೀಗ ದೆಹಲಿ ಮತ್ತು ಬಂಗಾಳಕ್ಕೆ ಪೂರೈಕೆಯಾಗುತ್ತಿದೆ.
ಕೆಲವೇ ದಿನಗಳ ಹಿಂದೆ ತಮ್ಮ ಬೆಳೆಗಳನ್ನು ರೈತರು ಸೂಕ್ತ ಬೆಲೆ ಸಿಗದೇ ರಸ್ತೆಗೆ ಎಸೆದು ಹೋಗಿರುವುದನ್ನು ನಾವು ನೋಡಿದ್ದೇವೆ. ಈ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಸಂಕಷ್ಟದಲ್ಲಿರುವ ರೈತರಿಗೆ ಭಾರತೀಯ ರೈಲ್ವೆ ನೆರವಿಗೆ ಧಾವಿಸಿದ್ದು, ಕೋಲಾರ-ಚಿಕ್ಕಬಳ್ಳಾಪುರದಿಂದ ದೆಹಲಿಗೆ ಟೊಮೆಟೋ ಬೆಳೆಗಳನ್ನು ಹೊತ್ತು ಸಾಗಿದೆ. ಕಿಸಾನ್ ರೈಲು ಸೇವೆಗಳ ಯಶಸ್ಸಿನಿಂದ ಉತ್ತೇಜಿತವಾದ ಬೆಂಗಳೂರು ರೈಲ್ವೆ ವಿಭಾಗವು ಮೊದಲ ಬಾರಿಗೆ ಪಶ್ಚಿಮ ಬಂಗಾಳ ಮತ್ತು ದೆಹಲಿಗೆ ಎಕ್ಸ್ಪ್ರೆಸ್ ರೈಲುಗಳ ಮೂಲಕ ಟೊಮೆಟೊಗಳನ್ನು ರವಾನಿಸಲು ಸಜ್ಜಾಗಿದೆ. ಈಗಾಗಲೇ ಇಲಾಖೆ ಪ್ರಾಯೋಗಿಕ ರವಾನೆ ಕಾರ್ಯ ಮಾಡಿದ್ದು, ಅದು ಯಶಸ್ವಿಯಾಗಿದೆ.
ಈ ಬಗ್ಗೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎ.ಎನ್.ಕೃಷ್ಣ ರೆಡ್ಡಿ ಅವರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆಗೆ ಮಾತನಾಡಿ, “ಹೌರಾ ರೈಲ್ವೆ ನಿಲ್ದಾಣಕ್ಕೆ 4 ಟನ್ ಟೊಮೆಟೊ ಸಾಗಿಸುವ ಪ್ರಯೋಗ ನಡೆಸಿದ ನಂತರ, ಪ್ರತಿಕ್ರಿಯೆ ಉತ್ತಮವಾಗಿದೆ. ರವಾನೆ ವೇಳೆ ಬೆಳೆ ಹಾನಿಗೊಳಗಾಗಲಿಲ್ಲ ಮತ್ತು ಟೊಮ್ಯಾಟೊ ಕೂಡ ತಾಜಾವಾಗಿತ್ತು. ನಮ್ಮ ಪ್ರತಿನಿಧಿಗಳು ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಟೊಮೆಟೊ ರೈತರು ಮತ್ತು ವ್ಯಾಪಾರಿಗಳೊಂದಿಗೆ ಮಾತನಾಡಿದ್ದಾರೆ. ಇಲ್ಲಿ ಮಾರುಕಟ್ಟೆಯಲ್ಲಿ ಕೊರತೆಯಿದೆ ಮತ್ತು ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ರೈತರಿಗೆ ಉತ್ತಮ ಬೆಲೆ ಪಡೆಯಲು ನಾವು ಸಹಾಯ ಮಾಡಬಹುದು ಎಂದು ಹೇಳಿದರು.
ಕೋಲಾರದ ಎಪಿಎಂಸಿ ಕಾರ್ಯದರ್ಶಿ ಟಿ.ಎಸ್.ರವಿಕುಮಾರ್ ಅವರು ಮಾತನಾಡಿ, ಕೋವಿಡ್ ನಿಯಮಗಳ ಕಾರಣದಿಂದಾಗಿ ಟೊಮೆಟೊ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ರಾಜ್ಯದಿಂದ ಹೊರಗೆ ತೆಗೆದುಕೊಂಡು ಹೋಗದ ಕಾರಣ ಕಷ್ಟಪಡುತ್ತಿದ್ದಾರೆ. ರೈಲ್ವೆ ಸೇವೆಯನ್ನು ಪ್ರಾರಂಭಿಸುವ ಮೊದಲು, ಉತ್ಪನ್ನಗಳನ್ನು ನಿರ್ವಹಿಸುವಲ್ಲಿ ಅನೇಕ ಅಂಶಗಳಿರುವುದರಿಂದ ವ್ಯಾಪಾರಿಗಳನ್ನು ಮಂಡಳಿಯಲ್ಲಿ ತರಬೇಕು ಎಂದು ಹೇಳಿದರು.
ಸಿಎಂಆರ್ ಟ್ರೇಡರ್ಸ್ನ ಮಾಲೀಕ ಸಿ.ಆರ್.ಶ್ರೀನಾಥ್ ಅವರು ಮಾತನಾಡಿ, “ರೈತರು ಈಗ ಪ್ರತಿ ಕೆಜಿ ಟೊಮೆಟೊಗೆ 5 ರಿಂದ 12 ರೂ. ಪಡೆಯುತ್ತಿದ್ದಾರೆ. ಕಳೆದ ವರ್ಷ ಬೆಲೆಗಳು ಹೆಚ್ಚಾಗಿದ್ದರಿಂದ ಟೊಮೆಟೊ ಬೆಳೆಯುವ ರೈತರ ಸಂಖ್ಯೆ ಈ ವರ್ಷ ಹೆಚ್ಚಾಗಿದೆ. ಇದು ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾಗಲು ಕಾರಣವಾಗಿದೆ ಮತ್ತು ಬೆಲೆಗಳು ಕುಸಿದಿವೆ ಎಂದು ಹೇಳಿದರು.