ರಾಜ್ಯ

ವಾಹನ ಸವಾರರಿಗೆ ಗುಡ್ ನ್ಯೂಸ್: ಚಾಲಕರು ಇನ್ಮುಂದೆ ಡಿಎಲ್, ಆರ್'ಸಿ ಬುಕ್ ತೆಗೆದುಕೊಂಡು ಹೋಗಬೇಕಿಲ್ಲ; ಡಿಜಿಟಲ್ ದಾಖಲೆ ಸಾಕು!

Manjula VN

ಬೆಂಗಳೂರು: ಡಿಜಿಟಲ್ ಕ್ರಾಂತಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದು, ಬೆಂಗಳೂರು ನಗರ ಪೊಲೀಸ್ ವಿಭಾಗವು ಡಿಜಿಟಿಲೀಕರಣದ ಮುಂಚೂಣಿಯಲ್ಲಿದೆ. ವಾಹನ ಸವಾರರಿಗೆ ಎಲ್ಲಾ ಸಮಯದಲ್ಲಿಯೂ ಅಗತ್ಯ ದಾಖಲಾತಿಗಳನ್ನು ಭೌತಿಕವಾಗಿ ತೆಗೆದುಕೊಂಡು ಹೋಗುತ್ತಿರುವ ಕಿರಿಕಿರಿಯಾಗುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ರೂಪದ ದಾಖಲೆಗಳನ್ನು ಹಾಜರುಪಡಿಸಲು ಸರ್ಕಾರ ಅವಕಾಶ ನೀಡಿದೆ.

ಇನ್ನು ಮುಂದೆ ಪೊಲೀಸರ ತಪಾಸಣೆಯ ವೇಳೆ ವಾಹನ ಸವಾರರು ಡಿಜಿಟಲ್ ದಾಖಲೆಗಳನ್ನೇ ಪ್ರದರ್ಶನ ಮಾಡಬಹುದು ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.  

ಡಿಜಿ ಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್‍ಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ನಿಯಮ ಜಾರಿ ಮಾಡುವ ಅಧಿಕಾರಿಗಳು ಮೊಬೈಲ್‍ನಲ್ಲಿ ಡಿಜಿಟಲ್ ರೂಪದಲ್ಲಿರುವ ಈ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಧಿಕೃತ ಎಂದು ಪರಿಗಣಿಸಬೇಕು ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

ಈ ಎರಡು ಅಪ್ಲಿಕೇಷನ್‍ನಲ್ಲಿ ಡಿಜಿಟಲ್ ರೂಪದಲ್ಲಿರುವ ದಾಖಲೆಗಳು ಸ್ವೀಕಾರಾರ್ಹ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಗಳು ಸ್ಪಷ್ಟಪಡಿಸಿವೆ. 

ಅಧಿಕಾರಿಗಳು ಇ ಚಲನ್ ಆ್ಯಪ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಬಹುದು. ಇದರಿಂದಾಗಿ ನಕಲಿ ದಾಖಲೆ ಹಾವಳಿಯನ್ನು ತಡೆಗಟ್ಟಲು ಸಾಧ್ಯ ಇದೆ. ವಾಹನ ಸವಾರರು ಪ್ಲೇ ಸ್ಟೋರ್‍ನಲ್ಲಿ ಡಿಜಿ ಲಾಕರ್ ಮತ್ತು ಎಂಪರಿವಾಹನ್ ಡೌನ್‍ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆ ದಾಖಲಿಸಿ ಕೆವೈಸಿ ದಾಖಲಿಸಿ ನೋಂದಣಿ ಮಾಡಿಕೊಳ್ಳಬೇಕು.

ತದನಂತರ ಕರ್ನಾಟಕ ಸರ್ಕಾರವನ್ನು ಆಯ್ಕೆ ಮಾಡಿಕೊಂಡು ನಿರ್ದಿಷ್ಟ ದಾಖಲೆಗಳನ್ನು ಡೌನ್‍ಲೋಡ್ ಹಾಗೂ ಸೇವ್ ಮಾಡಿಕೊಳ್ಳಬಹುದು. ವಾಹನ ಮಾಲೀಕರಲ್ಲದವರು ಚಾಲನೆ ಮಾಡುತ್ತಿದ್ದರೆ ವಾಹನದ ಮಾಲೀಕನ ಆ್ಯಪ್‍ನಿಂದ ದಾಖಲಾತಿಗಳನ್ನು ವರ್ಗಾವಣೆ ಮಾಡಿಕೊಂಡು ತಪಾಸಣೆ ವೇಳೆ ಹಾಜರುಪಡಿಸಬಹುದು. 

ಇದರಿಂದಾಗಿ ಡಿಜಿಟಲ್ ದಾಖಲೆಗಳಿಂದ ಅಸಲಿ ದಾಖಲೆಗಳು ಕಳೆದುಹೋಗುವ ಭಯ ಇಲ್ಲವಾಗುತ್ತದೆ. ಪೊಲೀಸರಿಗೂ ಕೂಡ ಈ ವ್ಯವಸ್ಥೆ ಸೂಕ್ತವಾಗಿದೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

SCROLL FOR NEXT