ರಾಜ್ಯ

ರಾಮನಗರದಲ್ಲಿ ತೋಟಗಾರಿಕಾ ಸಂಸ್ಕರಣಾ ಕ್ಲಸ್ಟರ್ ಸ್ಥಾಪನೆಗೆ ಸರ್ಕಾರ ನಿರ್ಧಾರ

Manjula VN

ಬೆಂಗಳೂರು: 15 ಎಕರೆ ವಿಸ್ತೀರ್ಣದಲ್ಲಿ ತೋಟಗಾರಿಕಾ ಸಂಸ್ಕರಣಾ ಕ್ಲಸ್ಟರ್ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. 4 ಎಕರೆಯಲ್ಲಿ ಮಾವು ಸಂಸ್ಕರಣಾ ಘಟಕ, 11 ಎಕರೆ ಜಮೀನಿನಲ್ಲಿ ವಿವಿಧ ತೋಟಗಾರಿಕಾ ಸಂಸ್ಕರಣಾ ಘಟಕಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಡಾ. ಸಿ. ಎನ್. ‌ಅಶ್ವತ್ಥ ನಾರಾಯಣ್ ಅವರು ಹೇಳಿದ್ದಾರೆ. 

ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಮಾವು ಸಂಸ್ಕರಣಾ ಘಟಕ ಹಾಗೂ ಹೈಟೆಕ್ ರೇಷ್ಮೆ ‌ಮಾರುಕಟ್ಟೆ ನಿರ್ಮಾಣ ಯೋಜನೆಗಳಿಗೆ ಸಂಬಂಧಿಸಿದಂತೆ ರೇಷ್ಮೆ ಖಾತೆ ಸಚಿವ ಆರ್. ‌ಶಂಕರ್‌, ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್, ಮಾಗಡಿ ಶಾಸಕ ಮಂಜುನಾಥ್‌ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಅಶ್ವತ್ಥ್ ನಾರಾಯಣ್ ಅವರು ಸಭೆ ನಡೆಸಿದರು.

ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಗೆ ಇವೆರಡೂ ಯೋಜನೆಗಳು ಬಹಳ ಉಪಯುಕ್ತವಾಗುತ್ತವೆ. ರೈತರಿಗೆ ಒಳ್ಳೆಯದಾಗಲಿದೆ. ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಬೈರಾಪಟ್ಟಣದಲ್ಲಿ ಗುರುತಿಸಲಾಗಿರುವ ಒಟ್ಟು 40 ಎಕರೆ ಪ್ರದೇಶವಿದ್ದು, ಮೊದಲ ಹಂತದಲ್ಲಿ 15 ಎಕರೆಯ 4 ಎಕರೆ ಪ್ರದೇಶದಲ್ಲಿ ಸಾಮಾನ್ಯ ಸೌಲಭ್ಯಗಳನ್ನು ಕಲ್ಪಿಸಿ ಉಳಿದ ಜಾಗದಲ್ಲಿ ಆಹಾರ ಸಂಸ್ಕರಣಾ ಕ್ಲಸ್ಟರ್ ಮಾಡಲಾಗುವುದು. ಇದರಲ್ಲಿಯೇ ಮಾವು ಸಂಸ್ಕರಣಾ ಘಟಕ ಕೂಡ ಬರುತ್ತದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಐದು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ರಫ್ತಾರ್ ಯೋಜನೆ ಅಡಿಯಲ್ಲಿ 10 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಕೇಂದ್ರವನ್ನು  ಕೋರಲಾಗಿದೆ. ಈಗಾಗಲೇ ಯೋಜನೆಗೆ ಪ್ರಾಥಮಿಕ ಒಪ್ಪಿಗೆ ಪಡೆಯಲಾಗಿದೆ. ಅಂತಿಮ ಒಪ್ಪಿಗೆಯ ಪ್ರಕ್ರಿಯೆಗಳಷ್ಟೇ ಬಾಕಿ. ಈ ಯೋಜನೆಗೆ ಖಾಸಗಿ ಕ್ಷೇತ್ರದಿಂದ 500 ಕೋಟಿ ರೂ. ಹೂಡಿಕೆ ಅಗತ್ಯವಿದ್ದು, ಹೂಡಿಕೆ ಮಾಡಿದವರಿಗೆ ಶೇ.40ರಷ್ಟು ಸಬ್ಸಿಡಿ ದೊರೆಯುತ್ತದೆ ಎಂದು ತಿಳಿಸಿದರು.

ಚನ್ನಪಟ್ಟಣ ಸಮೀಪದ ರೇಷ್ಮೆ ತರಬೇತಿ ಕೇಂದ್ರದಲ್ಲಿರುವ 20 ಎಕರೆ ಜಾಗದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ. ನಬಾರ್ಡ್‍ನಿಂದ 75 ಕೋಟಿ ರೂ. ಆರ್ಥಿಕ ನೆರವು ಸಿಗುತ್ತಿದೆ. ಮುಂಗಡ ಪತ್ರದಲ್ಲಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇಂದಿನ ಸಭೆಯಲ್ಲಿ ನಾಲ್ವರು ಆರ್ಕಿಟೆಕ್ಟ್ ಗಳು ಯೋಜನೆಯ ಪ್ರಾತ್ಯಕ್ಷಿಕೆ ನೀಡಿದರು ಎಂದು ಹೇಳಿದರು.

SCROLL FOR NEXT