ರಾಜ್ಯ

ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ತಾಯಿ, ಮಗ ಸಾವು!

Srinivasamurthy VN

ಬೆಂಗಳೂರು: ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ತಾಯಿ, ಮಗ ಸಾವನ್ನಪ್ಪಿದ ಘಟನೆ ನಗರದ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರಿನ ಭದ್ರಪ್ಪ ಲೇಔಟ್​ನಲ್ಲಿ ಈ ಅಪಘಾತ ಸಂಭವಿಸಿದ್ದು, ಬಿಡದಿ ಮೂಲದ 50 ವರ್ಷ ವಯಸ್ಸಿನ ಮಂಗಳಾ ಹಾಗೂ 30 ವರ್ಷದ ಹರೀಶ್ ಮೃತಪಟ್ಟಿದ್ದಾರೆ. 

ಇಬ್ಬರೂ ಸಮೀಪದ ಸಂಜಯನಗರದ ದೊಡ್ಡ ಬೈಲದಕೆರೆ ನಿವಾಸಿಗಳು ಎಂದು ತಿಳಿದುಬಂದಿದ್ದು, ಮೃತರು ತಳ್ಳುವಗಾಡಿಯಲ್ಲಿ ಫ್ಯಾನ್ಸಿ ವಸ್ತುಗಳ ಮಾರಾಟ ಮಾಡುತ್ತಿದ್ದರು. ಮೃತ ಹರೀಶ್ ಅಂಗವಿಕಲರಾಗಿದ್ದು, ವ್ಯಾಪಾರ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. 

ರೈಲ್ವೇ ಹಳಿ ದಾಟುವಾಗ ಈ ದುರ್ಘಟನೆ ಸಂಭವಿಸಿದ್ದು, ರೈಲು ಬರುವುದು ಗಮನಿಸದೆ ಟ್ರಾಕ್ ದಾಟಿರುವುದರಿಂದ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ರೈಲು ಹಳಿ ದಾಟುತ್ತಿದ್ದಾಗ ಹಿಂದಿನಿಂದ ಬಂದ ರೈಲು ಅವರಿಗೆ ಅಪ್ಪಳಿಸಿದೆ. ರೈಲು ಆಗಮನದ ಬಗ್ಗೆ ರೈಲಿನ ಲೋಕೋ ಪೈಲಟ್ ಹಾರ್ನ್ ಮಾಡಿದರೂ  ಹಳಿಯಲ್ಲಿದ್ದ ಅವರು ಸಾಗುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬೋರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
 

SCROLL FOR NEXT