ರಾಜ್ಯ

ರಾಮನಗರ: ಮ್ಯಾನ್ ಹೋಲ್‌ಗೆ ಇಳಿದ ಮೂವರು ಕಾರ್ಮಿಕರ ಸಾವು

Raghavendra Adiga

ರಾಮನಗರ: ನಿರ್ಮಾಣ ಹಂತದಲ್ಲಿದ್ದ ಮ್ಯಾನ್ ಹೋಲ್ ಗೆ ಇಳಿದು ಮೂವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ನಗರದ ಐಜೂರಿನ ನೇತಾಜಿ ಪಾಪ್ಯುಲರ್ ಶಾಲೆ ಎದುರು ಶುಕ್ರವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಮಂಜುನಾಥ್ (29), ಮಂಜುನಾಥ್ (32) ಹಾಗೂ ರಾಜೇಶ್ (40) ಎಂದು ಗುರುತಿಸಲಾಗಿದ್ದು, ಮೃತರು ಬೆಂಗಳೂರಿನ ಕಮಲಾನಗರದ ನಿವಾಸಿಗಳು ಎಂದು ತಿಳಿದು ಬಂದಿದೆ.

ನಗರದ 30 ನೇ ವಾರ್ಡ್ ನಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ‌ ಮುಕ್ತಾಯ ಹಂತದಲ್ಲಿದೆ. ಹೀಗಾಗಿ ಹೊಸ ಚರಂಡಿಗೆ ಹಾಕಲಾಗಿದ್ದ ಬ್ಲಾಕ್ ಅನ್ನು ತೆಗೆಯಲು ಈ ಕಾರ್ಮಿಕರು ಮ್ಯಾನ್ ಹೋಲ್ ಮೂಲಕ 15 ಅಡಿ ಆಳಕ್ಕೆ ಇಳಿದಿದ್ದರು.

ಮೊದಲು ರಾಜೇಶ್ ಎಂಬುವವರು ಕೆಳಗೆ‌ ಇಳಿದಿದ್ದು, ಆಯಾ ತಪ್ಪಿ ಬಿದ್ದಿದ್ದಾರೆ. ಪರಿಣಾಮ ಅವರ ತಲೆಗೆ ಪೆಟ್ಟಾಗಿತ್ತು. ಹಿಗಾಗಿ ಇವರನ್ನು ರಕ್ಷಿಸಲು ಉಳಿದಿಬ್ಬರೂ ಕೆಳಗೆ ಇಳಿದಿದ್ದು, ಉಸಿರುಗಟ್ಟಿ ಅಲ್ಲಿಯೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಆಮ್ಲಜನಕ‌ ಮಾಸ್ಕ್ ತೊಟ್ಟು ಕೆಳಗೆ ಇಳಿದು ಶವಗಳನ್ನು ಹೊರತೆಗೆದರು.

ಈ ಕುರಿತು ರಾಮನಗರ ಎಸ್ಪಿ ಗಿರೀಶ್ ಪ್ರತಿಕ್ರಿಯಿಸಿ, ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಯಾವುದೇ ಸುರಕ್ಷತಾ ನಿಯಮಗಳನ್ನು ಅನುಸರಿಸದೇ ಕಾಮಗಾರಿ ನಡೆಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ನರಸಿಂಹಮೂರ್ತಿ, ರಾಮನಗರ ನಗರಸಭೆ ಆಯುಕ್ತ ನಂದಕುಮಾರ್ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

SCROLL FOR NEXT