ರಾಜ್ಯ

ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಬಡವರಿಗಾಗಿ ಪ್ಯಾಕೇಜ್ ಘೋಷಿಸಿದ್ದೇವೆ: ಸಿಎಂ ಯಡಿಯೂರಪ್ಪ

Manjula VN

ಹಾಸನ: ಕೋವಿಡ್ ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿದ್ದರೂ ಬಡವರ ಅನುಕೂಲಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‌ಅವರು ಶುಕ್ರವಾರ ಹೇಳಿದ್ದಾರೆ. 

ಶುಕ್ರವಾರ ಹಾಸನದ ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು‌, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಅಪೇಕ್ಷೆಯಂತೆ ಸದ್ಯದಲ್ಲೇ ಹಾಸನ ಏರ್‌ಪೋರ್ಟ್ ಕೆಲಸ ಆರಂಭಿಸಲಾಗುವುದು. ಹಾಸನ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಹೆಚ್ಚಿದೆ. ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಕೋವಿಡ್‌ನಿಂದ ಜನ ಸಾವಿಗೀಡಾಗುತ್ತಿರುವುದಕ್ಕೆ ಸರ್ಕಾರವೇ ಕಾರಣ ಎಂಬ ಶಾಸಕ ಎಚ್.ಡಿ ರೇವಣ್ಣ ಹೇಳಿಕೆಗೆ ಕಿಡಿಕಾರಿದ‌ ಯಡಿಯೂರಪ್ಪ ಅವರು, ಜವಾಬ್ದಾರಿಯುತ ಶಾಸಕರಾಗಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಅವರು ಕೂಡ ಶಾಸಕರಾಗಿ ಕೆಲಸ ನಿರ್ವಹಿಸಬೇಕಿದೆ. ಅವರ ಕೆಲಸ ನಿರ್ವಹಿಸದೆ ಬೇರೆಯವರ ಬಗ್ಗೆ ಬೆಟ್ಟು ತೋರಿಸಬಾರದು ಎಂದು ತಿಳಿಸಿದ್ದಾರೆ. 

ಕೊರೋನಾ 3ನೇ ಅಲೆಯಲ್ಲಿ ಯಾವುದೇ ಅನಾಹುತ ಆಗದಂತೆ ಸಿದ್ಧತೆ ಮಾಡಲಾಗುತ್ತಿದೆ ಎಂದಿದ್ದಾರೆ. ಬಳಿಕ ಕೋವಿಡ್ ಬಗ್ಗೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬ ವಿರೋಧ ಪಕ್ಷದವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸುಳ್ಳು ಲೆಕ್ಕ ಕೊಡುತ್ತೇವೆ ಅಂದಿದ್ದು ಯಾರು..? ಅದರಿಂದ ನಮಗೇನು ಲಾಭ ಎಂದು ಪ್ರಶ್ನಿಸಿದರು.

ರಮೇಶ್ ಜಾರಕಿಹೋಳಿ ಪ್ರಕರಣದಲ್ಲಿ ಕಾನೂನು ಅದರದೆ ಆದ ಕ್ರಮ ಕೈಗೊಳ್ಳುತ್ತದೆ.‌ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದಿದ್ದಾರೆ. 

SCROLL FOR NEXT