ರಾಜ್ಯ

ಮೈಸೂರು: ಅನ್ಯ ಕೋಮಿನ ಯುವಕನ ಪ್ರೀತಿಸಿದ್ದ ಮಗಳನ್ನು ಕೊಂದು ತಂದೆ ಪೋಲೀಸರಿಗೆ ಶರಣು

Raghavendra Adiga

ಮೈಸೂರು: ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದ ಮಗಳನ್ನು ಕೊಂದು ತಂದೆಯೊಬ್ಬ ಪೋಲೀಸರಿಗೆ ಶರಣಾಗಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಮಹದೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಬಳಿ ನಡೆದ ಘಟನೆಯಲ್ಲಿ ಗಾಯತ್ರಿ (19) ಹತ್ಯೆಯಾಗಿದ್ದು ಈಕೆಯ ತಂದೆ ಜಯರಾಂ ಕೊಲೆ ಮಾಡಿದ್ದಾನೆ.

ಗಾಯತ್ರಿ ಪಿರಿಯಾಪಟ್ಟಣದ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ಪಟ್ಟಣದ ಉಪ್ಪಾರಗೇರಿ ಬಡಾವಣೆಯ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಮತ್ತು ಆತನನ್ನೇ ಮದುವೆ ಆಗುವುದಾಗಿ ಹಠ ಹಿಡಿದಿದ್ದಳು. ಕಳೆದ ಒಂದು ತಿಂಗಳಿನಿಂದಲೂ ಈ ವಿಚಾರದಲ್ಲಿ ಪೋಷಕರೊಂದಿಗೆ ಯುವತಿ ವಾಗ್ವಾದ ನಡೆಸಿದ್ದಾಳೆ.

ಇಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಊಟ ನೀಡಲು ಬಂದಿದ್ದಾಗ ಗಾಯತ್ರಿ ಹಾಗೂ ಆಕೆಯ ತಂದೆ ನಡುವೆ ಮತ್ತೆ ಜಗಳವಾಗಿದೆ. ಈ ವೇಳೆ ಜಯರಾಮ್ ತನ್ನಲ್ಲಿದ್ದ ಮಚ್ಚಿನಿಂದ  ಮನಬಂದಂತೆ ಕೊಚ್ಚಿ ಮಗಳನ್ನು ಕೊಂದಿದ್ದಾನೆ.

ಘಟನೆ ನಂತರ ಆರೋಪಿ ಪೋಲೀಸರೆದುರು ಶರಣಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ರವಿಪ್ರಸಾದ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

SCROLL FOR NEXT