ರಾಜ್ಯ

ಸೋಂಕಿತರ ಬೆಡ್ ಬುಕ್ಕಿಂಗ್ ಗೆ ಬಿಯು ನಂಬರ್ ಪದ್ಧತಿ ಕೈ ಬಿಟ್ಟ ಬಿಬಿಎಂಪಿ

Nagaraja AB

ಬೆಂಗಳೂರು: ಸೋಂಕಿತರ ಬೆಡ್ ಬುಕ್ಕಿಂಗ್ ಗೆ ಬಿಯು ನಂಬರ್ ಪದ್ದತಿಯನ್ನು ಬಿಬಿಎಂಪಿ ಕೈಬಿಟ್ಟಿದೆ. ಸದ್ಯಕ್ಕೆ ನಗರದಲ್ಲಿರುವ ಬೆಡ್ ಗಳ ಪೈಕಿ ಮೂರನೇ ಅಲೆಗೆ ಶೇ. 15 ಬೆಡ್ ಗಳನ್ನು ಹೆಚ್ಚಳ ಮಾಡಲು ಬಿಬಿಎಂಪಿ ಪ್ರಯತ್ನಿಸುತ್ತಿದೆ. 

ಇದಕ್ಕೆ ಪ್ರಮುಖ ಕಾರಣ ಬಿಯು ನಂಬರ್ ಸರಿಯಾದ ಸಮಯಕ್ಕೆ ಸೋಂಕಿತರಿಗೆ ಸಿಗದೆ ಇದ್ದಿದ್ದು. ಇದರ ಜೊತೆಗೆ ಬಿಯು ನಂಬರ್ ಬೇಕಾದರೆ ಹಣ ವಸೂಲಿ ಪ್ರಕರಣವೂ ಬೆಳಕಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮೂರನೇ ಅಲೆಯಲ್ಲಿ ಆ ಸಮಸ್ಯೆ ಬಗೆ ಹರಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಮೂರನೇ ಅಲೆಯಲ್ಲಿ ಬಿಯು ನಂಬರ್ ಕಡ್ಡಾಯ ಅಲ್ಲ ಅಂತ ಪಾಲಿಕೆ ಸ್ಪಷ್ಟ ಪಡಿಸಿದೆ.

ಆದರೆ ಬಿಯು ನಂಬರ್ ಬದಲಿಗೆ ಮೂರನೇ ಅಲೆಯಲ್ಲಿ ಎಸ್ ಆರ್ ಎಫ್ ನಂಬರ್ ಮುಖ್ಯ. ಈ ಎಸ್ ಆರ್ ಎಫ್ ನಂಬರ್ ಕೊರೋನಾ ಪರೀಕ್ಷೆ ವರದಿಯ ಜೊತೆಗೆ ಸೋಂಕಿತರಿಗೆ ಸಿಗಲಿದೆ. ಈ ಮೂಲಕ ಬೆಡ್ ಬುಕ್ ಮಾಡಲು ಮೂರನೇ ಅಲೆಯಲ್ಲಿ ಪರದಾಟ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೂರನೇ ಅಲೆಯಲ್ಲಿ ಪಾಸಿಟಿವ್ ವರದಿ ಬಂದ ಒಂದು ತಾಸಿನ ಒಳಗಡೆ ಸೋಂಕಿತರನ್ನು ಸಂಪರ್ಕಸಲು ಬೇಕಾಗಿ ಪಾಲಿಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಇದಕ್ಕಂತಲೇ ಕಂಟ್ರೋಲ್  ರೂಮಲ್ಲಿ ಸೂಪರ್ ಯೂಸರ್ ವಿಂಗ್ ಮಾಡಲು ಬಿಬಿಎಂಪಿ ಮುಂದಾಗಿದೆ. 

ತ್ವರಿತಗತಿಯಲ್ಲಿ ಸೋಂಕಿತರ ಸಂಪರ್ಕಿಸಲು ಕಂಟ್ರೋಲ್ ರೂಂನ ಈ ವಿಶೇಷ ಸೂಪರ್ ಯೂಸರ್ ತಂಡ ಇರಲಿದೆ. ಈ  ಸೂಪರ್ ಯೂಸರ್ ವ್ಯವಸ್ಥೆ ಮೂಲಕ ಒಂದು ತಾಸಿನ ಒಳಗಡೆಯೇ ಸೋಂಕಿತರ ಸಂಪರ್ಕಮಾಡಲಿದೆ ಪಾಲಿಕೆ. ಹೀಗೆ ಮಾಡುವುದರಿಂದ ಸೋಂಕಿತರು ಗಂಭೀರ ಸ್ಥಿತಿ ತಲುಪುವುದನ್ನು ತಡೆಯಬಹುದು. ಆರಂಭದಲ್ಲೇ ಪ್ರತಿ ಸೋಂಕಿತರ ಸಂಪರ್ಕ ಸಾಧ್ಯವಾದರೆ ಸಾವು ನೋವು ತಡೆಗಟ್ಟಬಹುದು ಎಂಬ ಲೆಕ್ಕಾಚಾರ ಪಾಲಿಕೆಯದ್ದಾಗಿದೆ.

SCROLL FOR NEXT