ರಾಜ್ಯ

ಕರ್ನಾಟಕದ ದೇವದರಿ ಪರ್ವತ ಶ್ರೇಣಿಯಲ್ಲಿ ಕೆಐಒಸಿಎಲ್‌ನಿಂದ ಗಣಿಗಾರಿಕೆಗೆ ಕೇಂದ್ರದ ತಾತ್ವಿಕ ಅನುಮೋದನೆ!

Vishwanath S

ಮಂಗಳೂರು: ಬಳ್ಳಾರಿಯ ದೇವದರಿ ಪರ್ವತ ಶ್ರೇಣಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಕೆಐಓಸಿಎಲ್ ಗೆ ತಾತ್ವಿಕ ಅನುಮೋದನೆ ನೀಡಿದೆ. 

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಬಳ್ಳಾರಿಯ ದೇವದರಿ ಪರ್ವತ ಶ್ರೇಣಿಯಲ್ಲಿನ 401.5761 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಪ್ರಥಮ ಹಂತದ ಅನುಮತಿ ನೀಡಿದೆ. ಇದು 1,500 ಕೋಟಿ ರೂಪಾಯಿ ಯೋಜನೆಯಾಗಿದೆ ಎಂದು ಕೆಐಓಸಿಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ವಿ ಸುಬ್ಬರಾವ್ ತಿಳಿಸಿದ್ದಾರೆ. 

ಕಳೆದ 15 ವರ್ಷಗಳ ಬಳಿಕ ಕರ್ನಾಟಕದಲ್ಲಿ ಗಣಿಗಾರಿಕೆ ಆರಂಭಗೊಂಡಿದೆ. ಪೂರ್ವ ಗಣಿಗಾರಿಕೆ ವೆಚ್ಚವಾಗಿ 300 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ದೊರಕಿದೆ. ಐದು ವರ್ಷಗಳ ಈ ಯೋಜನೆಯಡಿ ಸುಮಾರು 1 ಸಾವಿರ ಮಂದಿಗೆ ಉದ್ಯೋಗ ದೊರೆಯಲಿದೆ. ಈ ಪೈಕಿ 50ರಷ್ಟು ಜನರು ಖಾಯಂ ಉದ್ಯೋಗಿಗಳಾಗಲಿದ್ದಾರೆ. 

ಆರಂಭದಲ್ಲಿ ದೇವದರಿಯಲ್ಲಿ 0.3 ಮಿಲಿಯನ್ ಟನ್ ಗಣಿಗಾರಿಕೆಯೊಂದಿಗೆ ಪ್ರಾರಂಭವಾಗಲಿದ್ದು, ಇದು 5 ವರ್ಷಗಳ ಅವಧಿಯಲ್ಲಿ ಕ್ರಮೇಣ 2 ಮಿಲಿಯನ್ ಟನ್ ವರೆಗೆ ಹೆಚ್ಚಾಗಲಿದೆ ಎಂದು ಸುಬ್ಬರಾವ್ ಹೇಳಿದರು. 1,500 ಕೋಟಿ ರುಪಾಯಿಯಲ್ಲಿ ಆರಂಭದಲ್ಲಿ 150 ಕೋಟಿ ರುಪಾಯಿಯನ್ನು ಆರಂಭಿಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ ಎಂದು ಹೇಳಿದರು.

ಕೆಐಒಸಿಎಲ್ ಸಿಎಂಡಿ ಎಂ.ವಿ.ಸುಬ್ಬಾ ರಾವ್ 14 ವರ್ಷಗಳ ಸೇವೆಯ ನಂತರ ಜೂನ್ 30ರಂದು ನಿವೃತ್ತಿ ಹೊಂದಲಿದ್ದಾರೆ. ವಾರಂಗಲ್ ಕಾಲೇಜಿನಿಂದ ಮೆಟಲರ್ಜಿಯಲ್ಲಿ ಬಿ.ಟೆಕ್ ಪದವೀಧರರಾಗಿದ್ದ ಅವರು, ಆದಿತ್ಯ ಬಿರ್ಲಾ ಗ್ರೂಪ್‌ನಲ್ಲಿ 15 ವರ್ಷಗಳ ಕಾಲ ಮತ್ತು ಆಂಧ್ರಪ್ರದೇಶ ಸರ್ಕಾರದ ಒಡೆತನದ ಸ್ಟೀಲ್ ಪ್ಲಾಂಟ್‌ನಲ್ಲಿ ಕೆಐಒಸಿಎಲ್‌ಗೆ ತೆರಳುವ ಮೊದಲು ಕೆಲಸ ಮಾಡಿದರು.

SCROLL FOR NEXT