ರಾಜ್ಯ

ಹಿರಿಯ ಪತ್ರಕರ್ತ ಸುರೇಂದ್ರ ಶೆಟ್ಟಿ ವಿಧಿವಶ

Raghavendra Adiga

ಮಂಗಳೂರು: ಅಲ್ಪ ಕಾಲದ ಅನಾರೋಗ್ಯದ ನಂತರ ಹಿರಿಯ ಪತ್ರಕರ್ತ ಸುರೇಂದ್ರ ಶೆಟ್ಟಿ (57) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕನ್ನಡಪ್ರಭ ಪತ್ರಿಕೆಯ ಮಂಗಳೂರು ಆವೃತ್ತಿ ಮುಖ್ಯಸ್ಥರಾಗಿ ಕೆಲ ಕಾಲ ಸೇವೆ ಸಲ್ಲಿಸಿದ್ದ ಸುರೇಂದ್ರ ಶೆಟ್ಟಿ  ಮುಂಗಾರು, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯಕರ್ನಾಟಕ, ವಾರ್ತಾ ಭಾರತಿ ಮತ್ತಿತರ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಬ್ರಹ್ಮಾವರದ ಆವರ್ಸೆ ಪಡುಮನೆಯಲ್ಲಿ ಜನಿಸಿದ ಸುರೇಂದ್ರ ಶೆಟ್ಟಿ ಮಂಗಳೂರು ವಿ.ವಿ. ಯ ಸಮೂಹ‌ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಳೆ ವಿದ್ಯಾರ್ಥಿಗಳ ಸಂಘ ಎಂಎಎಎಂ ಸ್ಥಾಪಕ ಗೌರವಾಧ್ಯಕ್ಷರಾಗಿದ್ದರು. ವಿಭಾಗದ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರಾಗಿದ್ದರು. ಎಂಎಎಎಂ ಸಂಘಟನೆ ಮಂಗಳೂರಿನ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರಿಗೆ ಏರ್ಪಡಿಸಿದ ಮನೋಭಿನಂದನ ಸಮಾರಂಭದಲ್ಲಿ ಹೊರ ತಂದ ಮನೋಭಿನಂದನ ಅಭಿನಂದನಾ ಗ್ರಂಥದ ಸಂಪಾದಕರಾಗಿದ್ದರು.

ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಸುರೇಂದ್ರ ಶೆಟ್ಟಿ ಪತ್ನಿ, ಪುತ್ರಿ, ಕುಟುಂಬಸ್ಥರನ್ನು ಅಗಲಿದ್ದಾರೆ.

SCROLL FOR NEXT