ರಾಜ್ಯ

ಇಡೀ ಭಾರತಕ್ಕೆ ಲಾಕ್ಡೌನ್ ಅಗತ್ಯವಿಲ್ಲ, ಕರ್ನಾಟಕಕ್ಕೆ ಬೇಕಾಗಿದೆ: ತಜ್ಞರು

Manjula VN

ಬೆಂಗಳೂರು: ದೇಶದಲ್ಲಿ ದಿನ ಕಳೆದಂತೆ ಸೋಂಕಿತರ ಸಂಖ್ಯೆ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲೆ ಎಲ್ಲೆಡೆ ಇಡೀ ದೇಶವನ್ನು ಲಾಕ್ಡೌನ್ ಮಾಡುವಂತೆ ಆಗ್ರಹಗಳು ಕೇಳಿ ಬರುತ್ತಿವೆ. ಆದರೆ, ಕೆಲ ತಜ್ಞರು ಇಡೀ ಭಾರತಕ್ಕೆ ಲಾಕ್ಡೌನ್ ಅಗತ್ಯವಿಲ್ಲ. ಆದರೆ, ಹೆಚ್ಚೆಚ್ಚು ಸೋಂಕು ಇರುವ ಪ್ರದೇಶ ಹಾಗೂ ರಾಜ್ಯಗಳಿಗೆ ಲಾಕ್ಡೌನ್ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕೋವಿಡ್ ತಜ್ಞ ಸಮಿತಿಯ ಸದಸ್ಯ ಹಾಗೂ ವೈರಾಲಜಿಸ್ಟ್ (ಸೂಕ್ಷ್ಮರೋಗಾಣು ಶಾಸ್ತ್ರಜ್ಞ) ಡಾ.ವಿ.ರವಿಯವರು ಮಾತನಾಡಿ, ಪ್ರಸ್ತುತ ಬೆಳವಣಿಗೆ ಗಮನಿಸಿದರೆ, ಇಡೀ ಭಾರತಕ್ಕೆ ಲಾಕ್ಡೌನ್ ಅಗತ್ಯವಿಲ್ಲ ಎಂದೆನಿಸುತ್ತದೆ. ಕೆಲವು ತಿಂಗಳ ವೈಜ್ಞಾನಿಕ ವರದಿಯನ್ನು ಆಧರಿಸಿ ಆಯಾ ರಾಜ್ಯಗಳಲ್ಲಿ ಲಾಕ್ಡೌನ್ ಜಾರಿಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ. ಸೋಂಕು ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್ಡೌನ್ ಮಾಡುವುದು ಪರಿಹಾರವಲ್ಲ ಎಂದು ಹೇಳಿದ್ದಾರೆ. 

ಭಾರತದ ವಾಸ್ತವಿಕ ಸತ್ಯಗಳು ಬೇರೆಯಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕು ವ್ಯಾಪಕಗೊಂಡಿತ್ತು. ಇದೀಗ ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಅತ್ಯಂತ ಕಠಿಣ ಲಾಕ್ಡೌನ್ ಜಾರಿಗೆ ತರಲಾಗಿತ್ತು. ಇದೀಗ ಸಡಿಲಗೊಳಿಸಲು ಸರ್ಕಾರ ಮುಂದಾಗಿದೆ. ಕರ್ನಾಟಕದಲ್ಲಿಯೂ ಸೋಂಕು ವ್ಯಾಪಕಗೊಂಡಿದ್ದು, ಕೆಲವು ವಾರಗಳ ಬಳಿಕ ಕಡಿಮೆಯಾಗಲಿದೆ. ಹೀಗಾಗಿ ಇಡೀ ಭಾರತವನ್ನೇ ಲಾಕ್ಡೌನ್ ಮಾಡುವ ಬದಲು ಆಯಾ ರಾಜ್ಯಗಳಲ್ಲಿ ಮಾತ್ರ ಲಾಕ್ಡೌನ್ ಜಾರಿ ಮಾಡಬೇಕು ಎಂದು ತಿಳಿಸಿದ್ದಾರೆ. 

ಮಾರ್ಚ್ ಮಧ್ಯಂತರ- ಮೇ ತಿಂಗಳಿನಲ್ಲಿ ದೇಶದಲ್ಲಿ ಕೊರೋನಾ 2ನೇ ಅಲೆ ಏಳಲಿದೆ ಎಂದು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲೇ ನಾನು ಎಚ್ಚರಿಕೆ ನೀಡಿದ್ದೆ. ನಾನಷ್ಟೇ ಅಲ್ಲ, ಹಲವು ತಜ್ಞರು ಸಲಹೆ ಹಾಗೂ ಎಚ್ಚರಿಕೆಯನ್ನು ನೀಡಿತ್ತರು. ಆದರೆ, ಸಲಹೆಗಳನ್ನು ನಮ್ಮ ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ನಿರ್ಲಕ್ಷ್ಯಿಸಿದ್ದರು. ಮಹಾರಾಷ್ಟ್ರದಲ್ಲಿ ಸೋಂಕು ವ್ಯಾಪಕಗೊಂಡಾಗಲೂ ಕೂಡ ಯಾವುದೇ ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿಲ್ಲ. ಜನರು ಎಲ್ಲಾ ಎಚ್ಚರಿಕೆಗಳನ್ನು ಗಾಳಿಗೆ ತೂರಿದ್ದರು. ಸರ್ಕಾರ ಕೂಡ ಚುನಾವಣಾ ರ್ಯಾಲಿಗಳನ್ನು ನಡೆಸಿತು, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. 

ಸೋಂಕು ನಿಯಂತ್ರಣಗೊಂಡರೂ ಕೂಡ ಸರ್ಕಾರ ಆರ್ಥಿಕ ಚಟುವಟಿಕೆಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಕಡ್ಡಾಯವಾಗಿ ಮಾಸ್ಕ್'ಗಳನ್ನು ಧರಿಸಲೇಬೇಕು. ಲಸಿಕೆ ಪಡೆಯಬೇಕು. ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಕೊರೋನಾ 3ನೇ ಅಲೆ ಆರಂಭವಾಗಲಿದೆ. ಇದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಏಕೆಂದರೆ ಮಕ್ಕಳಿಗೆ ಯಾವುದೇ ಲಸಿಕೆಗಳೂ ಬಂದಿಲ್ಲ ಎಂದು ಎಚ್ಚರಿಸಿದ್ದಾರೆ. 

SCROLL FOR NEXT