ರಾಜ್ಯ

ಸೋಂಕು ನಿಯಂತ್ರಿಸಲು ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಿಸುವುದು ಸೂಕ್ತ; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

Manjula VN

ಬೆಂಗಳೂರು: ಲಾಕ್ಡೌನ್ ಘೋಷಣೆ ಮಾಡಿದ ಬಳಿಕ ಕೋವಿಡ್ ಪ್ರಕರಣಗಳು ಕಡಿಮೆಯಾಗಿರುವುದು ಕಂಡು ಬರುತ್ತಿದ್ದು, ಹೀಗಾಗಿ ಅನಿವಾರ್ಯವಾದರೆ, ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಿಸುವುದು ಸೂಕ್ತ ಎಂದು ಕೇಂದ್ರ ಸಚಿವ ಡಿವಿ.ಸದಾನಂದಗೌಡ ಅವರು ಹೇಳಿದ್ದಾರೆ. 

ನಂದಿನಿ ಲೇಔಟ್ ನ ಕೆಂಪೇಗೌಡ ಸಮದಾಯ ಭವನದಲ್ಲಿ ಕೋವಿಡ್ ಕೇರ್ ಕೇಂದ್ರವನ್ನು ಉದ್ಘಾಟಿಸಿ ಬಳಿಕ ಮಾತನಾಡಿರುವ ಅವರು, ಮುಂಬೈ, ಹೊಸದಿಲ್ಲಿ ಸೇರಿದಂತೆ ದೇಶದ ಹಲವು ಕಡೆ ಲಾಕ್‍ಡೌನ್ ನಂತರ ಕೋವಿಡ್ ಕಡಿಮೆ ಆಗಿದೆ. ರಾಜ್ಯದಲ್ಲೂ ಮೇ 24ಕ್ಕೆ ಕೊನೆಗೊಳ್ಳುವ ಲಾಕ್‍ಡೌನ್‍ನ್ನು ಪರಿಶೀಲಿಸಿ ವಿಸ್ತರಿಸುವ ಸಂಬಂಧ ರಾಜ್ಯ ಸರಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಅಭಿಪ್ರಾಯಿಸಿದ್ದಾರೆ.

ರಾಜ್ಯದ ಪ್ರತಿಯೊಬ್ಬರಿಗೂ ನಿಗದಿತ ವೇಳೆಯಲ್ಲಿ ಕೋವಿಡ್ ಲಸಿಕೆ ನೀಡುವುದು ಸರಕಾರದ ಉದ್ದೇಶವಾಗಿದೆ. ಇದಕ್ಕಾಗಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಮೊದಲ ಹಂತದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದಾಗ ಶೇ.40ರಿಂದ 50 ಮಂದಿ ಮಾತ್ರ ಸ್ಪಂದಿಸಿದ್ದರು. ಹೀಗಾಗಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೂ ನೀಡಲು ತೀರ್ಮಾನ ಮಾಡಲಾಯಿತು. ಆದರೆ, ಕೊರೋನ 2ನೇ ಅಲೆಯಿಂದಾಗಿ ಭಯಭೀತಿಗೊಂಡ ಜನತೆ ಲಸಿಕೆಗಾಗಿ ಮುಗಿಬಿದ್ದರು. ಹೀಗಾಗಿ ಲಸಿಕೆ ನೀಡಿಕೆ ಕಾರ್ಯಯೋಜನೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಯಿತೆಂದು ಅವರು ಹೇಳಿದ್ದಾರೆ.

ಕೊರೋನಾ ಲಸಿಕೆ, ಬ್ಲ್ಯಾಕ್ ಫಂಗಸ್ ಔಷಧಿ ಸೇರಿದಂತೆ ಎಲ್ಲಾ ಔಷಧಿಗಳ ಉತ್ಪಾದಕರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಸದ್ಯದಲ್ಲೇ ಎಲ್ಲ ಔಷಧಿಗಳ ಉತ್ಪಾದನೆಯನ್ನು ಹೆಚ್ಚಳ ಮಾಡಿ, ಅಭಾವವನ್ನು ನೀಗಿಸಲಾಗುವುದು. ಜನತೆ ಸರಕಾರದೊಂದಿಗೆ ಸ್ಪಂದಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

SCROLL FOR NEXT