ರಾಜ್ಯ

ಈ ವರ್ಷದ ಕನ್ನಡ ಹಬ್ಬ 'ಯುವರತ್ನ' ಪುನೀತ್ ಗೆ ಅರ್ಪಣೆ: ಹೆಚ್ ಡಿ ಕುಮಾರಸ್ವಾಮಿ  

Sumana Upadhyaya

ಬೆಂಗಳೂರು: ಕನ್ನಡಿಗರ ಪಾಲಿಗೆ ಇಂದು ನವೆಂಬರ್ 1 ಹಬ್ಬದ ದಿನ. 66ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಇಡೀ ಕರುನಾಡಿನಲ್ಲಿ ಮನೆ ಮಾಡಿದೆ. ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕಿದ್ದ ಹೊತ್ತಲ್ಲೇ ಅಭಿಮಾನಿಗಳಿಂದ ಪ್ರೀತಿಯಿಂದ ಅಪ್ಪು, ಪವರ್ ಸ್ಟಾರ್, ಯುವರತ್ನ ಎಂದು ಕರೆಸಿಕೊಳ್ಳುವ ನಟ ಪುನೀತ್ ರಾಜಕುಮಾರ್ ಹಠಾತ್ ನಿಧನರಾಗಿ ಕಾರ್ಮೋಡ ಕವಿದಿದೆ.

ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ಜಗತ್ತಿನ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮೆಲ್ಲರ ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವಾಗಲಿ. ಉಸಿರಿನ ಪ್ರತಿ ಕಣಕಣದಲ್ಲೂ ಕನ್ನಡವಿರಲಿ. ನಮ್ಮ ಆಶಯವೇ ಇದಾಗಿರಲಿ.

ಸಾವಿರದ 500 ವರ್ಷಗಳಿಗೂ ಹೆಚ್ಚು ಘನ ಇತಿಹಾಸವುಳ್ಳ ಕನ್ನಡ ಶಾಸ್ತ್ರೀಯ ಸ್ಥಾನ ಅಲಂಕರಿಸಿದ ಅಭಿಜಾತ ಕನ್ನಡ, ಅಷ್ಟ ಜ್ಞಾನಪೀಠಗಳ ಮೇರುಗನ್ನಡ, ನಮ್ಮ ಬದುಕು-ಬಾಳ್ವೆಯ ತಾಯ್ಗನ್ನಡ. ಕನ್ನಡವೆಂದರೆ ಬರೀ ಭಾಷೆಯಲ್ಲ, ನಮ್ಮ ಪಾಲಿನ ದೇವಭಾಷೆ. ನಮ್ಮ ಮನಸು-ಕನಸುಗಳನ್ನು ಅರಳಿಸಿ ಭವಿಷ್ಯದ ರೆಕ್ಕೆಕೊಟ್ಟು ಹಾರಲು ಶಕ್ತಿ ತುಂಬುವ ಜೀವಭಾಷೆ. ಕನ್ನಡಿಗರ ಮನೆ-ಮನದಲ್ಲೂ ಕನ್ನಡ ಬೆಳಗುತ್ತಿದೆ, ನಿಜ. ಆದರೆ, ನಮ್ಮ ಕಣ್ಮಣಿಯಾಗಿದ್ದ ಅಕ್ಕರೆಯ ಅಪ್ಪು, ಅಣ್ಣಾವ್ರ ಮುದ್ದಿನ ಕುಡಿ ಪುನೀತ್‌ ರಾಜಕುಮಾರ್‌ ಅವರು ಕನ್ನಡ ಹಬ್ಬಕ್ಕೆ ಮುನ್ನ ನಮನ್ನಗಲಿದ್ದಾರೆ. ನಮ್ಮೊಳಗೆ ಕನ್ನಡ ದೀಪವನ್ನು ಬೆಳಗುತ್ತಲೇ ಕಳೆದುಹೋದ ಯುವರತ್ನನ ಆದರ್ಶಗಳಿಗೆ ಅಗ್ರಪೀಠ ಹಾಕಿ ನಮಿಸೋಣ. ಆ ಮೂಲಕ ಪುನೀತರಾಗೋಣ.

ಭೂಮಂಡಲ ಇರುವಷ್ಟು ದಿನ ಕನ್ನಡವಿರುತ್ತದೆ. ಕನ್ನಡ ಇರುವಷ್ಟು ದಿನ ಅಪ್ಪು ಇರುತ್ತಾರೆ. ಈ ವರ್ಷ ಕನ್ನಡದ ಹಬ್ಬವನ್ನು ಪುನೀತ್‌ ರಾಜಕುಮಾರ್‌ ಅವರಿಗೆ ಅರ್ಪಿಸುತ್ತಾ, ಮತ್ತೊಮ್ಮೆ ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ ಎಂದು ಹೇಳಿದ್ದಾರೆ. 

SCROLL FOR NEXT