ರಾಜ್ಯ

ಪೆಗಾಸಸ್ ಗೂಢಚರ್ಯೆ ಆರೋಪ: ಸಿದ್ದರಾಮಯ್ಯ ಆತಂಕಕ್ಕೆ ಕೇಂದ್ರ ಗೃಹ ಇಲಾಖೆ ಸ್ಪಂದನೆ 

Srinivasamurthy VN

ಬೆಂಗಳೂರು: ಪೆಗಾಸಸ್ (Pegasus) ತಂತ್ರಾಂಶ ಬಳಸಿ ತಮ್ಮ ಮೇಲೆ ಗೂಢಚರ್ಯೆ ನಡೆಸಲಾಗುತ್ತಿದೆ ಎಂಬ ಕಾಂಗ್ರೆಸ್ (Congress) ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ (Union Ministry of Home Affairs-MHA) ಸ್ಪಂದನೆ ನೀಡಿದ್ದು, ಈ ಆರೋಪಕ್ಕೆ ಉತ್ತರ ನೀಡುವಂತೆ ರಾಜ್ಯ ಸರ್ಕಾರ (State Government)ಕ್ಕೆ ಸೂಚಿಸಿದೆ.

ಹೌದು.. ಗೂಢಚರ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆಗೆ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದು, ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಇಲಾಖೆ, ಪತ್ರಕ್ಕೆ ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಇಲಾಖೆಯು ಸೂಚನೆ ನೀಡಿದೆ. ಕಾನೂನು ಸುವ್ಯವಸ್ಥೆಯು ರಾಜ್ಯ ಸರ್ಕಾರದ ಅಧೀನಕ್ಕೆ ಬರುವ ವಿಷಯವಾಗಿರುವ ಹಿನ್ನೆಲೆಯಲ್ಲಿ ಈ ಪತ್ರವನ್ನು ಪರಿಶೀಲಿಸಿ, ಪತ್ರ ಬರೆದಿರುವವರಿಗೇ ನೇರವಾಗಿ ಲಿಖಿತ ಉತ್ತರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಇಲಾಖೆಯು ಸೂಚಿಸಿದೆ ಎನ್ನಲಾಗಿದೆ.

ಜುಲೈ 22 ರಂದು ಸಿದ್ದರಾಮಯ್ಯ ಅವರು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಮೂಲಕ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪೆಗಾಸಸ್ ಮೂಲಕ "ಅಕ್ರಮ" ಬೇಹುಗಾರಿಕೆಯ ಕುರಿತು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯನ್ನು ಕೋರಿ ಮನವಿ ಸಲ್ಲಿಸಿದ್ದರು. 

ಗೃಹ ಇಲಾಖೆ ಪತ್ರಕ್ಕೆ ಸಿದ್ದು ಆಕ್ಷೇಪ ಸಾಧ್ಯತೆ
ಇನ್ನು ಗೃಹ ಇಲಾಖೆಗೆ ನಡೆಗೆ ಸಿದ್ದರಾಮಯ್ಯ ಅವರು ಆಕ್ಷೇಪ ಸಲ್ಲಿಸುವ ಸಾಧ್ಯತೆ ಇದ್ದು, ಪೆಗಾಸಸ್ ಅನ್ನು ನಿರ್ವಹಿಸುವ ಇಸ್ರೇಲಿ ಕಂಪನಿ NSO ಪಾವತಿಸಿದ ಒಪ್ಪಂದದ ಮೇಲೆ ಕೆಲಸ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇಸ್ರೇಲ್ ಮೂಲದ ಸಂಸ್ಥೆಗೆ ಭಾರತದಲ್ಲಿ ಕಾರ್ಯಾಚರಣೆ ನಡೆಸಲು ಅವರಿಗೆ ಯಾರು ಹಣ ಸಹಾಯ ಮಾಡಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಇದು ಭಾರತ ಸರ್ಕಾರವಲ್ಲದಿದ್ದರೆ, ಅದು ಯಾರು ಎಂದು ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಪ್ರಶ್ನಿಸಿದ್ದಾರೆ. 

ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ಅವರು, 2019 ರಿಂದ, ವಿಶೇಷವಾಗಿ ಆ ವರ್ಷದ ಜೂನ್ ಮತ್ತು ಜುಲೈನಲ್ಲಿ, ಅವರು, ಅಂದಿನ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಇತರೆ ರಾಜಕಾರಣಿಗಳ ಸಂಖ್ಯೆಗಳ ಮೇಲೆ ಬೇಹುಗಾರಿಕೆ ನಡೆಸಲಾಯಿತು ಮತ್ತು ಈ ನಾಯಕರು ಮತ್ತು ಅವರ ವೈಯಕ್ತಿಕ ಸಿಬ್ಬಂದಿಯ ಫೋನ್ ಟ್ಯಾಪ್ ಮಾಡುವ ಮೂಲಕ ಕಣ್ಗಾವಲು ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ.

SCROLL FOR NEXT