ರಾಜ್ಯ

ಭಾನುವಾರ ಪುನೀತ್ ಸಮಾಧಿಗೆ ಅಪಾರ ಅಭಿಮಾನಿಗಳ ಭೇಟಿ, ಗೌರವ ನಮನ- ವಿಡಿಯೋ

Nagaraja AB

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ 10 ದಿನ ಕಳೆದರೂ, ಅಭಿಮಾನಿಗಳ ಅಭಿಮಾನ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ  ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಗೌರವ ನಮನ ಸಲ್ಲಿಸುತ್ತಿದ್ದಾರೆ. 

ಮಹಿಳೆಯರು, ಯುವಕ, ಯುವತಿಯರು, ವಿಶೇಷ ಚೇತನರು, ವೃದ್ಧರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಅಪ್ಪುವಿನ ಸಮಾಧಿ ಬಳಿಗೆ ಭೇಟಿ ನೀಡುತ್ತಿದ್ದು, ತಮ್ಮ ನೆಚ್ಚಿನ ನಾಯಕ ನಟನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಇಂದು ಗರ್ಭಿಣಿ ಮಹಿಳೆಯೊಬ್ಬರು ತನ್ನ ಒಂದು ತಿಂಗಳ ಮಗುವಿನೊಂದಿಗೆ ಅಪ್ಪು ಸಮಾಧಿ ಭೇಟಿ ಮಾಡಿದ್ದು ವಿಶೇಷವಾಗಿತ್ತು. 

ಈ ಮಧ್ಯೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ಕೂಡಾ ಇಂದು ಅಪ್ಪು ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಚಿತ್ರವೊಂದಕ್ಕೆ ಅವರು ಹಾಡೊಂದನ್ನು ಹಾಡಬೇಕಿತ್ತು. ಆದರೆ, ಅದು ಆಗದಿದ್ದಕ್ಕೆ ತುಂಬಾ ನೋವಾಗುತ್ತಿದೆ ಎಂದರು.

ನಾಳೆ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವಿದ್ದು, ಮಂಗಳವಾರ ಅರಮನೆ ಮೈದಾನದಲ್ಲಿ ಚಿತ್ರೋದ್ಯಮದ ಗಣ್ಯರು, ಅಪ್ಪು ಆಪ್ತ ಬಳಗಕ್ಕೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ನವೆಂಬರ್ 16 ರಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದಿಂದ ಅಪ್ಪುಗೆ ಗೌರವ ನಮನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ಟಾಲಿವುಡ್, ಕಾಲಿವುಡ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

SCROLL FOR NEXT