ರಾಜ್ಯ

ಶ್ರೀರಂಗಪಟ್ಟಣ: ಚಲಿಸುವ ರೈಲಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ನದಿಗೆ ಬಿದ್ದು ಯುವಕ ಸಾವು

Shilpa D

ಬೆಂಗಳೂರು: ಸೆಲ್ಫಿ ಪೋಟೋ – ವಿಡಿಯೋ ಚಿತ್ರೀಕರಿಸುವ ಭರದಲ್ಲಿ ಯುವಕನೋರ್ವ ಪ್ರಾಣ ಕಳೆದುಕೊಂಡು ದಾರುಣ ಘಟನೆ ನಡೆದಿದೆ.

19 ವರ್ಷದ ಯುವಕ ಅಭಿಷೇಕ್ ಮೃತ ದುರ್ದೈವಿ. ಬೆಂಗಳೂರಿನ ಗಾಂಧಿನಗರದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್, ಪೂಜೆ ನಿಮಿತ್ತ ನವೆಂಬರ್ 8 ರಂದು ಪಾಂಡವಪುರಕ್ಕೆ ರೈಲಿನಲ್ಲಿ ಸ್ನೇಹಿತರೊಂದಿಗೆ ತೆರಳುತ್ತಿದ್ದರು.

ಶ್ರೀರಂಘಪಟ್ಟಣ ಬಳಿ ಕಾವೇರಿ ನದಿಯ ಸೇತುವೆ ಮೇಲೆ ರೈಲು ಸಾಗುತ್ತಿದ್ದ ವೇಳೆ ಬಾಗಿಲಲ್ಲಿ ನಿಂತು ತಮ್ಮ ಮೊಬೈಲಿನಿಂದ ಪೋಟೋ – ವಿಡಿಯೋ ಚಿತ್ರೀಕರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದಾರೆ.

ನಡೆದ ದುರ್ಘಟನೆ ವಿಚಾರ ತಿಳಿಯದೇ ಪಾಂಡವಪುರದಲ್ಲಿ ರೈಲಿನಿಂದ ಇಳಿದ ಸ್ನೇಹಿತರು ಅಭಿಷೇಕ್ ಗಾಗಿ ಹುಡುಕಾಟ ನಡೆಸಿದ್ದಾರೆ. ಸಿಗದಿದ್ದಾಗ ಬೆಂಗಳೂರಿಗೆ ವಾಪಸಾಗಿದ್ದಾರೆ. ಈತನ ನಾಪತ್ತೆಯಾದ ಕಾರಣ ಪೋಷಕರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸ್ನೇಹಿತರ ಜೊತೆ ಪಾಂಡವಪುರಕ್ಕೆ ತೆರಳಿದ್ದ ಸುದ್ದಿ ತಿಳಿಯಿತು. ಜೊತೆಗೆ ಹೋದವರನ್ನು ಪತ್ತೆ ಹಚ್ಚಿದ್ದಾರೆ. ಅವರನ್ನು ವಿಚಾರಿಸಿದಾಗ ಶ್ರೀರಂಗಪಟ್ಟಣದ ನಂತರ ಕಾಣಲಿಲ್ಲವೆಂದು ಹೇಳಿದ್ದಾರೆ. ಮಂಡ್ಯ ರೈಲ್ವೆ ಪೊಲೀಸರ ಸಹಾಯದಿಂದ ಹುಡುಕಾಟ ನಡೆಸಿದಾಗ ನವೆಂಬರ್ 14 ರಂದು ಶ್ರೀರಂಗಪಟ್ಟಣ ಬಳಿ ಮೃತದೇಹ ಪತ್ತೆಯಾಗಿದೆ. ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

SCROLL FOR NEXT