ರಾಜ್ಯ

ಸಾಮಾನ್ಯ ಕನ್ನಡಿಗನಿಗೆ ಆರ್ಥಿಕ ಸಬಲತೆ ನೀಡುವುದು ಇಂದಿನ ಅಗತ್ಯ: ಅಕ್ಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶನಿವಾರ "ಅಮೆರಿಕ ಕನ್ನಡ ಕೂಟಗಳ ಆಗರ - ಅಕ್ಕ" ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಂಭ್ರಮ-2021 ಸಮಾರಂಭವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.

ಸಾಮಾನ್ಯ ಕನ್ನಡಿಗನಿಗೆ ಆರ್ಥಿಕ ಸಬಲತೆ ನೀಡುವುದು ಇಂದಿನ ಅಗತ್ಯ. ಆರ್ಥಿಕವಾಗಿ ಸಬಲವಾದ ಕುಟುಂಬ ಭಾಷೆಯ ಬೆಳವಣಿಗೆಗೆ ಪೂರಕವಾಗಿ ಶ್ರಮಿಸಬಹುದು ಎಂಬ ಆಶಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.  

ಕನ್ನಡಿಗರಿಗೆ ಉದ್ಯಮದಲ್ಲಿ ಅವಕಾಶ ನೀಡಲು ಆದ್ಯತೆ 

ಸಾಮಾನ್ಯ ಕನ್ನಡಿಗನೂ ಸೇರಿದಂತೆ ರಾಜ್ಯದಲ್ಲಿನ ಎಲ್ಲ ಕನ್ನಡ ಕುಟುಂಬಗಳು ಆರ್ಥಿಕ ಸಬಲತೆ ಹೊಂದಬೇಕೆಂಬುದು ನಮ್ಮ ಆಶಯ. ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಪೂರಕವಾಗಿ ಶಿಕ್ಷಣ ಮತ್ತು ಕೌಶಲ್ಯ ತರಬೇತಿಯನ್ನು ಕನ್ನಡದಲ್ಲಿ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಹಲವಾರು ತೊಂದರೆಗಳಿದ್ದರೂ ಅದನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬ ಬಗ್ಗೆ ಅಗತ್ಯ ಕಾನೂನುಗಳಿದ್ದು ಅದನ್ನು ಅಕ್ಷರಶಃ  ಪಾಲನೆ ಮಾಡಲಾಗುವುದು ಎಂದರು.   

ಕರ್ನಾಟಕದಲ್ಲಿ ಹೂಡಿಕೆಗೆ ಅವಕಾಶಗಳನ್ನು ತೆರೆಯಬೇಕು

ಕನ್ನಡ ನಾಡಿನ ಅಭಿವೃದ್ಧಿಗೆ  ಅಮೆರಿಕದ ಕನ್ನಡಿಗರು  ರಾಯಭಾರಿಗಳು.  ಕನ್ನಡಿಗರಿಗೆ ಪರಿಣಿತಿ ಮತ್ತು ಯೋಗ್ಯತೆ ಇದೆ.  ಆದರೆ ಅವರಿಗೆ  ಅವಕಾಶಗಳು ಬೇಕು. ಭಾರತದ ಆಚೆಯೂ ಕನ್ನಡಿಗರು  ಯಶಸ್ವಿಯಾಗಿದ್ದಾರೆ.   ವಿದೇಶದಲ್ಲಿ ಕನ್ನಡಿಗರು ಹೆಮ್ಮೆ ಪಡುವಂತೆ ಕನ್ನಡಿಗರು ನಡೆದುಕೊಳ್ಳುತ್ತಾರೆ.  ತಮ್ಮ ಅನುಭವದ ಮಾತುಗಳಿಗೆ ಬಹಳ ಬೆಲೆಯಿರುವುದರಿಂದ  ಅಲ್ಲಿಯ ಉದ್ಯಮಗಳ ಜೊತೆಗೆ ಮಾತನಾಡಿ  ಕರ್ನಾಟಕದ ಔದ್ಯೋಗಿಕ ವಾತಾವರಣದ ಬಗ್ಗೆ ತಿಳಿಸಿ ಹೂಡಿಕೆಗೆ ಅವಕಾಶಗಳನ್ನು ತೆರೆಯಬೇಕು ಎಂದರು. ಅದಕ್ಕೆ ಬೆಂಬಲವಾಗಿ ಕರ್ನಾಟಕ  ಸರ್ಕಾರವಿದೆ.   ಅಲ್ಲಿನ ಸರ್ಕಾರದಲ್ಲಿಯೂ ಪ್ರಮುಖ ಹುದ್ದೆಗಳನ್ನು ಕನ್ನಡಿಗರು ಪಡೆಯುವಂತಾಗಲಿ ಎಂದು ಆಶಿಸಿದರು. 

ಕನ್ನಡಿಗರಿಗಾಗಿ ಕನ್ನಡ ನಾಡು
ರಾಜ್ಯೋತ್ಸವ ಕನ್ನಡಿಗರಿಗೆ ಕನ್ನಡ ನಾಡು ಬೇಕೆಂಬ ಕೂಗಿಗೆ ಮನ್ನಣೆ ದೊರೆತ ದಿನ. ವಿವಿಧ ಭಾಗಗಳಲ್ಲಿ ಹರಿದುಹೋಗಿದ್ದ ಪ್ರಾಂತ್ಯಗಳನ್ನು ಒಂದುದೂಡಿಸಿ ಕನ್ನಡ ಭಾಷಿಕರನ್ನು ಒಂದೆಡೆ ತಂದು ಅವರ ಭವಿಷ್ಯ ನಿರ್ಮಾಣಕ್ಕೆ ಅವಕಾಶ ಕನ್ನಡ ನಾಡಿನ ಸ್ಥಾಪಣೆಯಿಂದ ಆಗಿದೆ. ಕನ್ನಡ ಅತ್ಯಂತ ಪುರಾತನ ಭಾಷೆ. ಭಾರತ ದೇಶದಲ್ಲಿ ವಿಂಧ್ಯಾ ಕೆಳಗೆ ಇರುವ ಎಲ್ಲಾ ಭಾಷೆಗಳ ಪೈಕಿ ಕನ್ನಡ ಅತ್ಯಂತ ಹಿರಿಯ ಭಾಷೆ. ತಮಿಳಿಗಿಂತ  ಮುನ್ನ ಕನ್ನಡ ಅಸ್ತಿತ್ವದಲ್ಲಿತ್ತು ಎನ್ನಲು ಸಾಕಷ್ಟು ಪುರಾವೆಗಳಿವೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೂ ದೊರೆತಿದೆ. ಇಂಥ ಭಾಷೆಯನ್ನು ನಮ್ಮ ಕವಿಗಳು, ಬರಹಗಾರರು, ಸಾಹಿತಿಗಳು ಇಷ್ಟು ವರ್ಷ ಶ್ರೀಮಂತಗೊಳಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಭಾಷೆಯಿಂದ  ಕನ್ನಡದ ವಿವಿಧ ಆಯಾಮಗಳ ಬಗ್ಗೆ ಬಹಳ ಉತ್ಕೃಷ್ಟ ವಾದಂಥ ಲೇಖನ ಸಾಹಿತ್ಯ ನೀಡಿ ಕನ್ನಡದ ಪರಂಪರೆಯನ್ನು ಇಂದಿಗೂ  ಶ್ರೀಮಂತವಾಗಿರಿಸಿದ್ದಾರೆ.ಹರಿಹರ ರಾಘವಾಂಕ, ನೃಪತುಂಗನಿಂದ ಪ್ರಾರಂಭವಾಗಿ ಹಳೆಗನ್ನಡದ ಎಲ್ಲಾ ಸಾಹಿತ್ಯ, ಪುರಾಣಕಾರರು,   ಸೃಜನಶೀಲ ಸಾಹಿತ್ಯ, ಬಂಡಾಯ ಸಾಹಿತ್ಯ, ಎಲ್ಲವೂ ಕನ್ನಡದ ಬೆಳೆವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ. ನಮ್ಮ ಮಕ್ಕಳಿಗೆ ಇದನ್ನು ತಿಳಿಸುವ ಕೆಲಸ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು. 

ಅಕ್ಕ ಸಂಸ್ಥೆ ಕಟ್ಟಿ ಬೆಳೆಸಿದ ಎಲ್ಲರಿಗೂ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ  ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಧೇಂದ್ರ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಐಟಿ ಬಿಟಿ, ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವತ್ ನಾರಾಯಣ್, ಇಂಧನ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್, ಅಮೆರಿಕ ಕನ್ನಡ ಒಕ್ಕೂಟಗಳ ಆಗರ (ಅಕ್ಕ) ಅಧ್ಯಕ್ಷ ತುಮಕೂರು ದಯಾನಂದ್, ಉಪಾಧ್ಯಕ್ಷ ಡಾ. ಅಮರನಾಥ್ ತಾವರೆಕೆರೆ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT