ಬೆಂಗಳೂರು: ಬಳ್ಳಾರಿ ರಸ್ತೆಯ ಚಿಕ್ಕಜಾಲದಲ್ಲಿ ಗುರುವಾರ ಕ್ಯಾಬ್ಗೆ ಎಸ್ಯುವಿ ಢಿಕ್ಕಿಯಾಗಿ ಅಪಘಾತ ಸಂಭವಿಸಿದ ಸ್ಥಳವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶುಕ್ರವಾರ ಪರಿಶೀಲಿಸಿದ್ದು, ಇಂತಹ ಅಪಘಾತಗಳನ್ನು ತಡೆಯಲು ಕ್ರಮಗಳ ಕೈಗೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವೇಗವಾಗಿ ಬರುತ್ತಿದ್ದ ಎಸ್'ಯುವಿ ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ ಕಾರು ಚಾಲಕ ಹಾಗೂ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಗುರುವಾರ ಮೃತಪಟ್ಟಿದ್ದರು.
ಪುರ್ಣಿಮಾ ರವಿಚಂದ್ರನ್ (63) ಅವರ ಪುತ್ರಿ ಲಕ್ಷ್ಮೀ ರವೀಂದ್ರನ್ (37) ಎಂಬುವವರು ಮೃತಪಟ್ಟಿದ್ದರು. ಇಬ್ಬರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ವಿಮಾನ ನಿಲ್ದಾಣಕ್ಕೆ ಕ್ಯಾಬ್ ನಲ್ಲಿ ತೆರಳಲುತ್ತಿದ್ದರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರು: ಮಳೆಯಿಂದ ಭೀಕರ ಅಪಘಾತ, ಮೂವರು ದುರ್ಮರಣ
ಇನ್ನು ಕಾರು ಚಾಲಕ ರಘವೇಂದ್ರ (46) ಬನ್ನೇರುಘಟ್ಟದ ನಿವಾಸಿಯಾಗಿದ್ದು, ಘಟನೆಯಲ್ಲಿ ಇವರೂ ಮೃತಪಟ್ಟಿದ್ದಾರೆ.
ಪುರ್ಣಿಮಾ ಅವರ ಪುತ್ರಿ ಲಕ್ಷ್ಮೀ ಲಂಡನ್ ನಲ್ಲಿ ನೆಲೆಯೂರಿದ್ದು, ಯೋಗ ತರಬೇತಿ ಪಡೆಯುವ ಸಲುವಾಗಿ ಬೆಂಗಳೂರಿಗೆ ತನ್ನ ತಾಯಿ ಜೊತೆಗೆ ಬಂದಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಕ್ಕಿ ಹೊಡೆದ ಎಸ್'ಯುವಿ ಕಾರಿನಲ್ಲಿ ಭರತ್ ಹಾಗೂ ಆತನ ಗೆಳೆಯ ವಿಕಾಸ್ ಎಂಬುವರಿದ್ದು, ಇಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ಬಳಿಕ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಜಂಟಿ ಪೊಲೀಸ್ ಆಯುಕ್ತ (ಸಂಚಾರಿ) ಬಿ.ಆರ್.ರವಿಕಾಂತೇ ಗೌಡ ಅವರು, ಅಪಘಾತಗಳನ್ನು ತಡೆಯಲು ರಸ್ತೆಯಲ್ಲಿ ಸೂಕ್ತ ದೀಪ ಅಳವಡಿಸುವುದು, ರಸ್ತೆ ಮೀಡಿಯನ್ ಎತ್ತರ ಹೆಚ್ಚಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎನ್ಎಚ್ಎಐಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಕೂಡೇ ಸೂಕ್ತ ಕ್ರಮ ಕೈಗೊಳ್ಳದಿದ್ದಲೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ
ಇನ್ನು ಘಟನೆ ಕುರಿತು ಎಸ್'ಯುವಿ ಕಾರು ಚಾಲಕ ಭರತ್ ಅವರು ಪೊಲೀಸರಿಗೆ ಹೇಳಿಕೆ ನೀಡಿ, ತೀವ್ರ ಮಳೆಯಿದ್ದ ಕಾರಣ ಕಾರು ಬರುತ್ತಿರುವುದು ತಿಳಿಯಲಿಲ್ಲ. ತೀವ್ರ ವೇಗದಲ್ಲಿ ಚಲಿಸುತ್ತಿದ್ದ ಹಿನ್ನೆಲೆಯಲ್ಲಿ ವಾಹನ ನಿಯಂತ್ರಣ ತಪ್ಪಿತ್ತು ಎಂದು ಹೇಳಿದ್ದಾರೆ.
ಈ ನಡುವೆ ಚಾಲಕ ಅವರ ರಕ್ತದ ಮಾದರಿಯನ್ನು ಪೊಲೀಸರು ಸಂಗ್ರಹಿಸಿದ್ದು, ವೈದ್ಯಕೀಯ ವರದಿಯಲ್ಲಿ ಆತ ಪಾನಮತ್ತನಾಗಿರಲಿಲ್ಲ ಎಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಭರತ್ ವಿರುದ್ಧ ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.