ರಾಜ್ಯ

ಸಾರಿಗೆ ನೌಕರರ ಬಗ್ಗೆ ಹಗೆತನ ಬೇಡ: ಸರಣಿ 'ಕೂ' ಮಾಡಿದ ಕುಮಾರಸ್ವಾಮಿ

Harshavardhan M

ಬೆಂಗಳೂರು: ಸಾರಿಗೆ ನೌಕರರಿಗೆ ಸೆಪ್ಟೆಂಬರ್ ತಿಂಗಳ ಸಂಬಳ ಆಗದಿರುವ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ 'ನೌಕರರ ಮೇಲೆ ಹಗೆತನ ಸಾಧಿಸುವುದು ಬೇಡ ಎಂದು ಸರಣಿ ಕೂ ಮಾಡಿದ್ದಾರೆ. 

'ಕೋರೋನ ಮಹಾಮಾರಿಯಿಂದ ತತ್ತರಿಸಿರುವ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ನೌಕರರ ಮೇಲೆ ಸರಕಾರಕ್ಕೆ ಅನಾದರ ಏಕೆ? ಈ ನೌಕರರಿಗೆ ಅಗಸ್ಟ್ ತಿಂಗಳಲ್ಲಿ ಅರ್ಧ ಸಂಬಳವೇ ಆಗಿದ್ದು, ಸೆಪ್ಟೆಂಬರ್ ತಿಂಗಳ ಪೂರ್ಣ ಸಂಬಳ ಆಗಿಲ್ಲ ಎನ್ನುವ ಮಾಹಿತಿ ನನಗೆ ಬಂದಿದೆ' ಎಂದು ಬರೆದುಕೊಂಡಿದ್ದಾರೆ. 

'ಮಕ್ಕಳು ತಪ್ಪು ಮಾಡುವುದು ಸಹಜ. ತಂದೆ ತಾಯಿ ಸ್ಥಾನದಲ್ಲಿರುವ ಸರಕಾರ ಕ್ಷಮಿಸಿ ಔದಾರ್ಯ ತೋರಿಸುವ ದೊಡ್ಡ ಮನಸ್ಸು ಮಾಡಬೇಕು. ಸಾರಿಗೆ ನೌಕರರ ಮೇಲೆ ಹಗೆತನ ಸಾಧಿಸುವುದು ಬೇಡ. ಜೀವದ ಹಂಗು ತೊರೆದು, ಮಹಾಮಾರಿಯನ್ನು ಲೆಕ್ಕಿಸದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ' ಎಂದು ಹೇಳಿದ್ದಾರೆ. 

'ಸಾರಿಗೆ ನೌಕರರ ವೇತನ ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಸಲು  ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು  ಕೂಡಲೇ ಕ್ರಮ ವಹಿಸಬೇಕು' ಎಂದು ಒತ್ತಾಯಿಸಿದ್ದಾರೆ.

ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರ ಮುಷ್ಕರದ ಸಂದರ್ಭದಲ್ಲಿ ವಜಾ, ಅಮಾನತು ಮತ್ತು ವರ್ಗಾವಣೆಗೊಂಡ 6,444 ಪ್ರಕರಣಗಳಲ್ಲಿ 4,344 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವಿಧಾನಸಭೆಯಲ್ಲಿ ತಿಳಿಸಿದ್ದರು.

SCROLL FOR NEXT