ರಾಜ್ಯ

ಸಚಿವರು ಅಧಿವೇಶನಕ್ಕೆ ಗೈರು ಹಾಜರಾಗುವಂತಿಲ್ಲ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

Manjula VN

ಬೆಂಗಳೂರು: ಸೆ.13ರಿಂದ ನಡೆಯುವ ವಿಧಾನಸಭೆ ಅಧಿವೇಶನದ ಕಲಾಪಗಳಲ್ಲಿ ಎಲ್ಲಾ ಸಚಿವರು ಹಾಜರಿರುವಂತೆ ಸೂಚನೆ ನೀಡುವಂತೆ ಮುಖ್ಯಮಂತ್ರಿಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ಈ ಸಂಬಂಧ ಎಲ್ಲಾ ಸಚಿವರಿಗೂ ಅಗತ್ಯ ಸೂಚನೆಗಳನ್ನು ನೀಡಬೇಕು. ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಚಿವರು ಕಲಾಪದಲ್ಲಿ ಹಾಜರಾಗುವ ಸಂಬಂಧ ವಿನಾಯಿತಿ ಕೋರುವುದು ಸಾಮಾನ್ಯವಾಗಿದೆ’ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಮಹತ್ವದ ವಿಚಾರಗಳ ಬಗ್ಗೆ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸಂಬಂಧಿತ ಸಚಿವರು ಉತ್ತರ ನೀಡಬೇಕಾಗುತ್ತದೆ.  ಹೀಗಾಗಿ ಸಚಿವರು ಚರ್ಚೆಯ ವೇಳೆ ಸದನದಲ್ಲಿ ಗೈರಾಗುವುದು ಸರಿಯಲ್ಲ. ಸಚಿವರ ಅನುಪಸ್ಥಿತಿ, ಆಡಳಿತ ಪಕ್ಷದಿಂದ ಉತ್ತರ ಪಡೆಯುವ ಸದಸ್ಯರ ಅವಕಾಶವನ್ನು ವಂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಸಚಿವರು ಸದನದಲ್ಲಿ ಹಾಜರಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಇದೇ ಸ್ವರೂಪದ ಪತ್ರವನ್ನು ಎಲ್ಲ ಸಚಿವರಿಗೂ ವ್ಯಕ್ತಿಗತವಾಗಿ ಕಳುಹಿಸಿರುವ ಸಭಾಧ್ಯಕ್ಷರು, ಸದನದ ಕಾರ್ಯ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಮತ್ತು ತಮ್ಮ ಕ್ಷೇತ್ರಗಳ ಅಧಿಕೃತ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಕಲಾಪದಿಂದ ವಿನಾಯಿತಿ ಕೋರದಂತೆಯೂ ಸೂಚಿಸಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT