ರಾಜ್ಯ

ಸಕಲೇಶಪುರ: ಗಣೇಶ ವಿಸರ್ಜನೆ ವೇಳೆ ಪೊಲೀಸರು-ಭಜರಂಗ ದಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ!

Manjula VN

ಹಾಸನ: ಸಕಲೇಶಪುರದಲ್ಲಿ ಗಣೇಶ ವಿಸರ್ಜನೆ ವೇಳೆ ಭಜರಂಗದಳ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಯುವಕರ ಗುಂಪು ಪೊಲೀಸರನ್ನೇ ತಳ್ಳಾಡಿದ ಘಟನೆ ನಡೆದಿದೆ. 

ಗಣೇಶ ವಿಸರ್ಜನೆ ವೇಳೆ ನಡೆಯುತ್ತಿದ್ದ ಡಿಜೆ ಡ್ಯಾನ್ಸ್ ತಡೆಯಲು ಸಬ್ ಇನ್ಸ್​ಪೆಕ್ಟರ್​ ಬಸವರಾಜು ಮತ್ತು ಚಿಂಚೋಳಿ ಪಿಎಸ್ಐ ಮುಂದಾಗಿದ್ದು, ಈ ವೇಳೆ ಯುವಕರ ಗುಂಪು ಸಬ್ ಇನ್ಸ್​ಪೆಕ್ಟರ್ ಮತ್ತು ಪಿಎಸ್ಐ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆಂದು ತಿಳಿದುಬಂದಿದೆ. 

ಭಜರಂಗ ದಳದ ರಘು ಮತ್ತು ಅವರ ಸಂಗಡಿಗರು ಡಿಜೆ ಡ್ಯಾನ್ಸ್ ತಡೆಯಲು ಮುಂದಾದ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಬ್ಯಾಂಡ್ ಬಾರಿಸದಂತೆ ಪಿಎಸ್ಐ ಕೋಲು ಕಸಿದುಕೊಂಡಿದ್ದು, ಬಳಿಕ ಸಬ್ ಇನ್ಸ್​​ಪೆಕ್ಟರ್​ ಕೈಯಲ್ಲಿದ್ದ ಬ್ಯಾಂಡ್ ಸೆಟ್ ಕೋಲನ್ನು ಯುವಕನೊಬ್ಬ ಕಸಿದುಕೊಂಡಿದ್ದಾರೆ. 

ಸರ್ಕಾರದ ನಿಯಮದಂತೆ ಪೊಲೀಸರು ಡಿಜೆ ತಡೆಯಲು ಮುಂದಾಗಿದ್ದಾರೆ. ಆದರೆ, ಯುವಕರು ಇದಕ್ಕೆ ವಿರುದ್ಧವಾಗಿ ವರ್ತನೆ ತೋರಿದ್ದಾರೆ. ಬಳಿಕ ಪೊಲೀಸರು ಕೆಲ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

ಮೆರವಣಿಗೆ ವೇಳೆ ಸರ್ಕಾರಿ ನೌಕರರೊಬ್ಬರೂ ಕೂಡ ಭಾಗಿಯಾಗಿದ್ದು, ಪೊಲೀಸ್ ಪೇದೆಯನ್ನು ತಳ್ಳಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. 

SCROLL FOR NEXT