ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಕನ್ನಡ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ್ದಾರೆ.
ಸಿನಿಮಾ ನಟ- ನಟಿಯರು ಹಾಗೂ ರಾಜಕೀಯ ನಾಯಕರನ್ನು ಟಾರ್ಗೆಟ್ ಮಾಡಿ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ಪ್ರಶಾಂತ್ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಕ್ರವರ್ತಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬ್ಯಾಡ್ ಲಕ್ ಪೋಸ್ಟ್: ಪ್ರಶಾಂತ್ ಸಂಬರಗಿಗೆ ದಿವಂಗತ ಡಿಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ತಿರುಗೇಟು!
ಯಾವುದೇ ಆಧಾರ ಇಲ್ಲವೇ ನಟ- ನಟಿಯರನ್ನು ಪ್ರಶಾಂತ್ ಸಂಬರಗಿ ಟಾರ್ಗೆಟ್ ಮಾಡುತ್ತಿದ್ದಾರೆ. 3 ವರ್ಷಗಳ ಹಿಂದೆ ಮೀಟೂ ಪ್ರಕರಣದಲ್ಲಿ ಗಾಳಿಯಲ್ಲಿ ಗುಂಡು ಹೊಡೆದಿದ್ದರು. ಅಲ್ಲದೇ, ನಟಿ ಶೃತಿ ಹರಿಹರನ್ ಗೆ ಕ್ರೈಸ್ತ ಮಿಷನರಿಯಿಂದ ಕೋಟ್ಯಾಂತರ ಹಣ ಸಂದಾಯವಾಗಿದೆ ಎಂದು ಹೇಳಿದ್ದರು. ಆದರೆ, ಈ ಕುರಿತು ಯಾವುದೇ ದಾಖಲೆ ಬಿಡುಗಡೆಗೊಳಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಜಮೀರ್ ಅಹ್ಮದ್ ತೆರಿಗೆ ಹಣದಲ್ಲಿ ಶ್ರೀಲಂಕಾ ಕ್ಯಾಸಿನೋಗೆ ಹೋಗಿ ಮೋಜು, ಮಸ್ತಿ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಅದಕ್ಕೂ ದಾಖಲೆ ನೀಡದೇ ಬ್ಲಾಕ್ಮೇಲ್ ಮಾಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ನಟಿಯರು ಡ್ರಗ್ಸ್ನಿಂದಲೇ ಹಣ ಸಂಪಾದನೆ ಮಾಡುತ್ತಿದ್ದಾರೆ. ಅದರ ಮೂಲ ಗೊತ್ತು ಎಂದಿದ್ದರು. ಈ ಬಗ್ಗೆಯೂ ದಾಖಲೆ ನೀಡಿಲ್ಲ. ಇದರಿಂದ ಕನ್ನಡ ಚಿತ್ರರಂಗದ ಮಾನವನ್ನು ದೇಶದಾದ್ಯಂತ ಹರಾಜು ಹಾಕಿದ ಹಾಗಾಗಿದೆ. ಇದುವರೆಗೂ ಮಾಧ್ಯಮದ ಮುಂದೆ ಹೇಳಿದ ಹೇಳಿಕೆಗೆ ದಾಖಲೆಗಳನ್ನು ನೀಡಿಲ್ಲ ಎಂದು ಅವರು ದೂರಿದ್ದಾರೆ.
ನಟಿ, ಕಿರುತೆರೆ ನಿರೂಪಕಿ ಅನುಶ್ರೀ ಕೊಟ್ಯಾಂತರ ರೂಪಾಯಿ ಮೌಲ್ಯದ ಮನೆ ಕಟ್ಟಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆಯೂ ದಾಖಲೆ ಕೊಟ್ಟಿಲ್ಲ. ಶುಗರ್ ಡ್ಯಾಡಿ ಬಗ್ಗೆಯೂ ದಾಖಲೆಗಳನ್ನು ಯಾವೊಬ್ಬ ಅಧಿಕಾರಿಗಳಿಗೂ ನೀಡಿಲ್ಲ. ಈ ಎಲ್ಲಾ ಪ್ರಕರಣ ಗಮನಿಸಿದಾಗ ಪ್ರಶಾಂತ್ ಸಂಬರಗಿ ಬ್ಲಾಕ್ಮೇಲ್ ದಂಧೆಯಲ್ಲಿ ತೊಡಗಿದ್ದಾರೆಂದು ಅನುಮಾನವಿದೆ. ಈ ಕಾರಣಕ್ಕೆ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ದೂರು ನೀಡಿದ್ದಾರೆ.