ರಾಜ್ಯ

ಸರ್ ಎಂ.ವಿಶ್ವೇಶ್ವರಯ್ಯನವರ ಹಾದಿಯಲ್ಲಿಯೇ ನಾಡು ಕಟ್ಟಲು ಸಂಕಲ್ಪ ಮಾಡೋಣ: ಸಿಎಂ ಬಸವರಾಜ ಬೊಮ್ಮಾಯಿ

Sumana Upadhyaya

ಬೆಂಗಳೂರು: ಎಂಜಿನಿಯರ್ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆ ಆರ್ ವೃತ್ತದಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸರ್ ಎಂ ವಿಶ್ವೇಶ್ವರಯ್ಯನವರ 161ನೇ ಜಯಂತಿ. ವಿಶ್ವೇಶ್ವರಯ್ಯ ಜೀವನ ಮೌಲ್ಯ, ಅವರ ಬುದ್ಧಿವಂತಿಕೆ, ಶ್ರಮಿಕ ಮನೋಭಾವವನ್ನು ನಾವು ಅದರಲ್ಲೂ ಯುವಜನತೆ ಅನುಸರಿಸಬೇಕಾಗಿದೆ. ರೈತರು, ಕಾರ್ಮಿಕ ವರ್ಗ ಹೊಲದಲ್ಲಿ ಕೆಲಸ ಮಾಡುವ ಶ್ರಮಜೀವಿಗಳು ದೇಶದ ಆರ್ಥಿಕತೆಯನ್ನು ಹೆಚ್ಚಿಸುವವರು, ಅವರ ಪ್ರತಿನಿಧಿಯಾಗಿ ಸರ್ ಎಂ ವಿಶ್ವೇಶ್ವರಯ್ಯನವರು ನಿಲ್ಲುತ್ತಾರೆ ಎಂದರು.

ವಿಶ್ವೇಶ್ವರಯ್ಯನವರು ಈ ನಾಡಿನ ಭವ್ಯ ಏಳಿಗೆಗೆ ಕನಸು ಕಂಡಂತವರು, ಅವರಡಿಯಲ್ಲಿ ಹಲವಾರು ಕಾರ್ಯಕ್ರಮಗಳು ಆಗಿವೆ, ಅವರ ಸಾಧನೆ ಹಲವಾರು. ಕೆಆರ್ ಎಸ್ ಡ್ಯಾಂನಿಂದ ಹಿಡಿದು ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು, ಕಾರ್ಖಾನೆಗಳು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮಹಿಳಾ ಮೀಸಲಾತಿ ಕುರಿತು ಪ್ರಗತಿಪರ ಚಿಂತನೆಯನ್ನು ನಡೆಸಿದ್ದ ಸರ್ ಎಂ ವಿಶ್ವೇಶ್ವರಯ್ಯನವರಿಗೆ ನಮನಗಳನ್ನು ಸಲ್ಲಿಸುವ ದಿನವಿಂದು ಎಂದು ಹೇಳಿದರು.

ಅವರ ಸಂಕಲ್ಪದಂತೆ ನಡೆದು ನಾಡು ಕಟ್ಟುವ ಸಂಕಲ್ಪ ಮಾಡುವ ದಿನವಿಂದು. ಇಲ್ಲಿ ಕೆ ಆರ್ ವೃತ್ತದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಕಾರಂಜಿ ಕೂಡ ಆರಂಭಿಸಿದ್ದೇವೆ. ಇದೇ ರೀತಿ ಬೆಂಗಳೂರಿನ 30 ಕಡೆಗಳಲ್ಲಿ ನಿರ್ಮಿಸಲಾಗುತ್ತಿದ್ದು ಬೆಂಗಳೂರಿನ ಅಂದವನ್ನು ಹೆಚ್ಚಿಸಲಿದೆ. ಬಿಬಿಎಂಪಿ ಈ ಕೆಲಸವನ್ನು ಮಾಡುತ್ತಿದೆ. ಸರ್ ಎಂ ವಿಶ್ವೇಶ್ವರಯ್ಯನವರು ವಿದ್ಯುತ್ ಉತ್ಪಾದನೆ, ನೀರಾವರಿ, ಶಿಕ್ಷಣಕ್ಕೆ ನೀಡಿದ ಕಾಣಿಕೆಯ ಹಿನ್ನೆಲೆಯಲ್ಲಿ ಈ ನಾಡನ್ನು ಕಟ್ಟುವ ಕೆಲಸಕ್ಕೆ ನಾವೆಲ್ಲರೂ ಶ್ರಮಪಡೋಣ ಎಂದರು.

ಸಿಎಂ ಅವರ ಜೊತೆ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬೆಸ್ಕಾಂ ನೌಕರ ಚಂದನ್ ಎಂಬುವವರು ಕೂಡ ಕೈಜೋಡಿಸಿದ್ದು ವಿಶೇಷವಾಗಿತ್ತು. 

ಕಳಪೆ ಕಾಮಗಾರಿ ವಿರುದ್ಧ ಕ್ರಮ: ಬೆಂಗಳೂರು ನಗರದ ರಸ್ತೆ ಕಾಮಗಾರಿ ಬಗ್ಗೆ ಬಿಬಿಎಂಪಿ ಆಯುಕ್ತರ ಬಳಿ ವರದಿ ತರಿಸಲಿದ್ದು ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದರೆ, ಕಳಪೆಯಾಗಿದ್ದರೆ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. 

SCROLL FOR NEXT