ಬೆಂಗಳೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಪೊಲೀಸರು ಸ್ಥಳ ಮಹಜರು ಮುಗಿಸಿದ್ದು, ಈ ವೇಳೆ ಹಲವು ಪ್ರಮುಖ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ತಿಗಳರಪಾಳ್ಯದ ಮನೆಯಲ್ಲಿ ಎಸಿಪಿ, ಇನ್ಸ್ಪೆಕ್ಟರ್ ಗಳ ನೇತೃತ್ವದಲ್ಲಿಇಂದು ಸ್ಥಳ ಮಹಜರು ನಡೆದಿದ್ದು, ಈ ವೇಳೆ ಮೂವರ ಡೆತ್ ನೋಟ್ ಪತ್ತೆಯಾಗಿವೆ. ಅಲ್ಲದೇ, ಮನೆಯಲ್ಲಿ 15 ಲಕ್ಷ ರೂ.ನಗದು, ಎರಡು ಕೆ.ಜಿ.ಯಷ್ಟು ಚಿನ್ನಾಭರಣ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಸುಮಾರು ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆ ಮಾಲೀಕ ಶಂಕರ್, ಇಬ್ಬರು ಅಳಿಯಂದಿರು, ಒಬ್ಬ ಸಂಬಂಧಿಕ ಸಹ ಉಪಸ್ಥಿತರಿದ್ದರು. ಪೊಲೀಸರು ಕೀ ಮೇಕರ್ ನನ್ನು ಕರೆಸಿ, ಲಾಕರ್ ತೆಗೆಸಿದ್ದಾರೆ. ಅಲ್ಲದೇ ತಪಾಸಣೆ ವೇಳೆ ಮನೆಯ ರೂಮ್ಗಳಲ್ಲಿ ಅಲ್ಲಲ್ಲಿ ನೋಟುಗಳು ಹರಿದು ಬಿದ್ದಿದ್ದವು ಎನ್ನಲಾಗಿದೆ.