ರಾಜ್ಯ

ಚಾಣಕ್ಯ ವಿವಿ ಮಸೂದೆ: ಚರ್ಚೆಗೆ ಆಗ್ರಹಿಸಿ ಗದ್ದಲ, ಕೊನೆಗೂ ಕಾಯ್ದೆಗೆ ಅಂಗೀಕಾರ

Srinivasamurthy VN

ಬೆಂಗಳೂರು: ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವ ಸೌಹಾರ್ದ ಸಹಕಾರ ಸಂಸ್ಥೆಗಳ ತಿದ್ದುಪಡಿ ಕಾಯ್ದೆಗೆ ವಿಧಾನಪರಿಷತ್ ನಲ್ಲಿ ಅಂಗೀಕಾರಗೊಂಡಿದೆ.

ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮಂಡಿಸಿದ ಮಸೂದೆಯನ್ನು ಮಂಗಳವಾರ ಪರ್ಯಾಲೋಚನೆಯಾದ ನಂತರ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. 

ಏತನ್ಮಧ್ಯೆ ಈಗಾಗಲೇ ವಿಧಾನಸಭೆಯಲ್ಲಿ ಅನುಮೋದನೆಯಾಗಿರುವ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಸಚಿವ ಅಶ್ವತ್ಥನಾರಾಯಣ್ ಮಂಡಿಸುತ್ತಿದ್ದಂತೆ ಚರ್ಚೆಯಿಲ್ಲದೆಯೇ ಅಂಗೀಕಾರ ಸಾಧ್ಯವಿಲ್ಲವೆಂದು ಪ್ರತಿಪಕ್ಷ ಸದಸ್ಯ ಮರಿತಿಬ್ಬೇಗೌಡ ಮತ್ತಿತರರು ವಿರೋಧಿಸಿದರು. ಒಂದು ಹಂತದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಸದಸ್ಯ ಮರಿತಿಬ್ಬೇಗೌಡ ಸದನದ ಬಾವಿಗಿಳಿದಾಗ ಸಭಾಪತಿಯವರು ಕುಪಿತರಾದರು. ಈ ವೇಳೆ ಮಾತಿನ ಚಕಮಕಿ, ಕೂಗಾಟ, ಗದ್ದಲ ಕೇಳಿಬಂತು.

ತರಾತುರಿಯಲ್ಲಿ ಖಾಸಗಿ ವಿವಿ ಮಂಡನೆ ಕೈಗೆತ್ತಿಕೊಳ್ಳುವುದೇಕೆ? ಅಜೆಂಡಾದಂತೆ ಕಲಾಪಗಳನ್ನು ನಡೆಸದೆ ಮನಬಂದಂತೆ ನಡೆಸುವುದೇಕೆ ಎಂದು ಎಸ್ ಆರ್ ಪಾಟೀಲ್ ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಸಭಾಪತಿಗಳು, 'ಚರ್ಚೆಯ ನಂತರವಷ್ಟೇ ಚಾಣಕ್ಯ ವಿವಿ ಅಂಗೀಕಾರವಾಗಲಿದೆ' ಎಂದು ಸಭಾಪತಿಯವರು ಸಮ್ಮತಿಸಿದ ಮೇಲೆ ಮೇಲ್ಮನೆ ಕೊಂಚ ಶಾಂತವಾಯಿತು.

ಸಹಕಾರಿ ಕ್ಷೇತ್ರವೂ ಹಾದಿತಪ್ಪಿದೆ: ಮರಿತಿಬ್ಬೇಗೌಡ
ಇದಕ್ಕೂ ಮುನ್ನ, ಸಹಕಾರಿ ಕ್ಷೇತ್ರವೂ ಇತ್ತೀಚೆಗೆ ಹಾದಿತಪ್ಪಿದೆ. ಇಲ್ಲಿನ ಚುನಾವಣೆಗಳಲ್ಲಿ ಗೆಲ್ಲುವುದಕ್ಕೂ ಹಣ ಖರ್ಚು ಮಾಡಬೇಕಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮಂಡಿಸಿದ ಮಸೂದೆಗೆ ಸ್ಪಷ್ಟನೆ ಕೋರಿ, ರೈತ ಸಮುದಾಯಕ್ಕೆ ಒಳಿತು ಮಾಡುವ ಸಲುವಾಗಿ ನ್ಯೂನತೆಗಳನ್ನು ಸರಿಪಡಿಸಲಾಗಿದೆ. ಸದಸ್ಯತ್ವ ಉಳಿಯಬೇಕಿದ್ದಲ್ಲಿ 3 ವರ್ಷ ಸಂಘದಲ್ಲಿ ಕಡ್ಡಾಯವಾಗಿ ವ್ಯವಹರಿಸಬೇಕು ಎಂಬುದನ್ನು 2 ವರ್ಷಕ್ಕೆ ಇಳಿಸಲಾಗಿದೆ. ತಿದ್ದುಪಡಿ ಮಸೂದೆ ಸಹಕಾರ ಸಂಘಗಳ ಕತ್ತು ಹಿಚುಕದೆ, ರೈತರಿಗೆ ಸಹಕರಿಸುವ ಉದ್ದೇಶ ಹೊಂದಲಿ ಎಂದರು.

ಯು ಬಿ ವೆಂಕಟೇಶ್, ಎಸ್ ಆರ್ ಪಾಟೀಲ್, ಬೋಜೇಗೌಡ, ಬಸವರಾಜ್, ಅಪ್ಪಾಜಿಗೌಡ ಮೊದಲಾದ ಸದಸ್ಯರು ತಿದ್ದುಪಡಿ ಮೇಲಿನ ಪರ್ಯಾಲೋಚನೆ ಸಂದರ್ಭದಲ್ಲಿ ಸರ್ಕಾರಕ್ಕೆ ಸಲಹೆ ನೀಡಿದರು. ಚರ್ಚೆಯ ನಂತರ ಧ್ವನಿಮತದ ಮೂಲಕ ತಿದ್ದುಪಡಿ ಮಸೂದೆ ಅಂಗೀಕಾರವಾಯಿತು.

SCROLL FOR NEXT