ರಾಜ್ಯ

ತಡರಾತ್ರಿ ಹೆಣ್ಣುಮಕ್ಕಳು ಕೆಲಸ ಮಾಡಬಾರದು: ವಿವಾದ ಹುಟ್ಟುಹಾಕಿದ ಬಿಜೆಪಿ ಮಹಿಳಾ ಎಂಎಲ್'ಸಿ ಹೇಳಿಕೆ

Manjula VN

ಬೆಂಗಳೂರು: ಅಪರಾಧ ಕೃತ್ಯಗಳಿಗೆ ಗುರಿಯಾಗದಂತೆ ಹಾಗೂ ಸುರಕ್ಷತಾ ದೃಷ್ಟಿಯಿಂದ ಮಹಿಳೆಯರು ತಡರಾತ್ರಿ ಕೆಲಸ ಮಾಡಲು ಅನುಮತಿ ನೀಡಬಾರದು ಎಂದು ಬಿಜೆಪಿ ಎಂಎಲ್'ಸಿ ಭಾರತಿ ಶೆಟ್ಟಿಯವರು ನೀಡಿರುವ ಹೇಳಿಕೆಯೊಂದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. 

ವಿಧಾನಪರಿಷತ್ ನಲ್ಲಿ ನಿನ್ನೆ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಭಾರೀ ಗದ್ದಲವನ್ನು ಸೃಷ್ಟಿಸಿದೆ. ಈ ವಿಚಾರ ಸಂಬಂಧ ನಡೆದ ಚರ್ಚೆಯಲ್ಲಿ ಮಾತನಾಡಿರುವ ಭಾರತಿ ಶೆಟ್ಟಿಯವರು, ಇತ್ತೀಚಿನ ಅತ್ಯಾಚಾರ ಪ್ರಕರಣಗಳನ್ನು ಗಮನಿಸಿದರೆ, ಜೊತೆಗಿರುವ ಪುರುಷ ಸ್ನೇಹಿತರಿಗಿಂತ ಮಹಿಳೆಯರು ಹೆಚ್ಚು ಬಲಿಪಶುವಾಗುತ್ತಿರುವುದು ಕಂಡು ಬರುತ್ತಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷಣವಾಗಲು ಕಾನೂನು ಕೂಡ ಬಲಗೊಳ್ಳಬೇಕಿದೆ. ಹೀಗಾಗಿ ಕಠಿಣವಾದ ಹೊಸ ಕಾನೂನು ಜಾರಿಗೆ ತಂದು, ಈ ಕಾನೂನು ಅಪರಾಧಿಗಳನ್ನು ಬಂಧಿಸಲು ಅನುವು ಮಾಡಿಕೊಡುವಂತೆ ಮಾಡಬೇಕೆಂದು ಸಲಹೆ ನೀಡಿದ್ದಾರೆ. 

ಇದೇ ವೇಳೆ ಮಹಿಳೆಯರು ರಾತ್ರಿ ವೇಳೆ ನಿರ್ಜನ ಪ್ರದೇಶಗಳಿಗೆ ಹೋಗಬಾರದು ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. 

ಭಾರತಿ ಶೆಟ್ಟಿಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಜನವಾದಿ ಮಹಿಳಾ ಸಂಘದ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಅವರು, ತಡರಾತ್ರಿ ಕೆಲಸವಾಗಲಿ ಅಥವಾ ಹೊರಾಂಗಣದಲ್ಲೇ ಇರಲಿ, ಮಹಿಳೆಯರನ್ನು ನಿರ್ಬಂಧಿಸುವುದು ಅವರ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಮಧ್ಯರಾತ್ರಿಯವರೆಗೆ ಧರಣಿಯಲ್ಲಿ ಕುಳಿತಾಗ ಭಾರತಿ ಶೆಟ್ಟಿ ಅಥವಾ ಇತರ ಮಹಿಳಾ ಶಾಸಕರು ಏನು ಮಾಡುತ್ತಾರೆ?

ವಿರೋಧ ಪಕ್ಷದ ನಾಯಕ ಎಸ್ಆರ್. ಪಾಟೀಲ್ ಅವರು ಮಾತನಾಡಿ, ಎಲ್ಲಾ ಸಮಯದಲ್ಲೂ ಮಹಿಳೆಯರು ಸುರಕ್ಷತೆಯಿಂದ ಓಡಾಡಬೇಕೆಂಬುದು ಮಹಾತ್ಮ ಗಾಂಧೀಜಿಯವರ 'ರಾಮ ರಾಜ್ಯ' ಕನಸಾಗಿತ್ತು. ಆದರೆ, ಭಾರತಿ ಶೆಟ್ಟಿಯವರ ಈ ಹೇಳಿಕೆ ಸರಿಯಲ್ಲ ಎಂದಿದ್ದಾರೆ. ಕಾಂಗ್ರೆಸ್ ಮುಖ್ಯ ಸಚೇತಕ ಎಂ ನಾರಾಯಣಸ್ವಾಮಿ ಅವರು ಮಾತನಾಡಿ, ಭಾರತಿ ಶೆಟ್ಟಿಯವರ ಹೇಳಿಕೆ ಅಪ್ರಾಯೋಗಿಕವಾದದ್ದು ಎಂದಿದ್ದಾರೆ. 

SCROLL FOR NEXT