ಬೆಂಗಳೂರು: ರಾಜ್ಯದ ಗಡಿ ಭಾಗದಲ್ಲಿ ಸಾರಿಗೆ ಇಲಾಖೆಯಿಂದ ಅಳವಡಿಸಿರುವ 15 ಚೆಕ್ ಪೋಸ್ಟ್ ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೆಪಿಎಸ್ ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಆದಷ್ಟು ಬೇಗ ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಮೇಲ್ಮನೆಗೆ ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಗಡಿ ಭಾಗದಲ್ಲಿ ಸಾರಿಗೆ ಇಲಾಖೆಯಿಂದ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಗಡಿ ಭಾಗದಲ್ಲಿನ ಎಲ್ಲಾ 15 ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಲು 37 ಖಾಯಂ ಹುದ್ದೆ ಮಂಜೂರಾಗಿದ್ದು 8 ಹುದ್ದೆ ಮಾತ್ರ ಭರ್ತಿಯಾಗಿದೆ ಎಂದರು.
ಸದ್ಯ 29 ಹುದ್ದೆಗಳು ಖಾಲಿ ಇವೆ. ಇದರ ಜೊತೆಗೆ ಇಲಾಖೆಯಲ್ಲಿ 2021 ರವರೆಗೆ 2781 ಹುದ್ದೆ ಮಂಜೂರಾತಿ ಆಗಿದ್ದು, 1257 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 1529 ಹುದ್ದೆಗಳು ಖಾಲಿ ಇವೆ. ತಾಂತ್ರಿಕ ತೊಂದರೆಯಿಂದ ಭರ್ತಿ ಮಾಡಲು ಸಾಧ್ಯವಾಗಿಲ್ಲ ಈಗ ಕೆಪಿಎಸ್ ಸಿಗೆ ಹುದ್ದೆ ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದು ಸದನಕ್ಕೆ ತಿಳಿಸಿದರು.