ರಾಜ್ಯ

ಈದ್ಗಾ ಮೈದಾನ ವಿವಾದ: ಧಾರ್ಮಿಕ ಆಚರಣೆಗೆ ಅನುಮತಿ ನೀಡುವುದನ್ನು ಕಂದಾಯ ಇಲಾಖೆ ನೋಡಿಕೊಳ್ಳುತ್ತದೆ- ಜಮೀರ್ ಗೆ ಅಶೋಕ್ ತಿರುಗೇಟು

Vishwanath S

ಬೆಂಗಳೂರು: ಚಾಮರಾಜಪೇಟೆಯ ಮೈದಾನ ಕಂದಾಯ ಆಸ್ತಿಯಾಗಿದ್ದು ಇಲ್ಲಿ ಧಾರ್ಮಿಕ ಆಚರಣೆ ಸೇರಿದಂತೆ ವಿವಿಧ ಉತ್ಸವಗಳಿಗೆ ಅನುಮತಿ ನೀಡುವುದು, ಬಿಡುವುದು ಕಂದಾಯ ಇಲಾಖೆ ನೋಡಿಕೊಳ್ಳುತ್ತದೆ ಎಂದು ಸಚಿವ ಆರ್ ಅಶೋಕ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ತಿರುಗೇಟು ನೀಡಿದ್ದಾರೆ.

ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲು ಇದುವರೆಗೂ ಯಾವುದೇ ಮನವಿ ಬಂದಿಲ್ಲ. ಮನವಿ ಬಂದರೆ ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನು ಪರಿಶೀಲಿಸಿ ತೀರ್ಮಾನ ಮಾಡಲಾಗುವುದು ಎಂದು ಅರ್ ಅಶೋಕ್ ಹೇಳಿದ್ದಾರೆ. 

ಸ್ವಾತಂತ್ರ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿ ಬೇಕಿಲ್ಲ. ಆದರೆ ಕಾನೂನು ಸುವ್ಯವಸ್ಥೆ ಗೊಂದಲ ಇರುವ ಕಡೆ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಹಾರಿಸಲು ಅನುಮತಿ ಬೇಕಾಗುತ್ತದೆ. ಹಾಗಾಗಿ ಚಾಮರಾಜಪೇಟೆ ಮೈದಾನ ಸೇರಿದಂತೆ ಸ್ವಾತಂತ್ರ್ಯ ಆಚರಣೆ ಸಂಬಂಧ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ತೀರ್ಮಾನ ಮಾಡುತ್ತದೆ ಎಂದರು.

ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಮೀರ್ ಅಹ್ಮದ್ ಖಾನ್, ಈದ್ಗಾ ಮೈದಾನದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ದಿನ, ಜನವರಿ 26ರಂದು ಗಣರಾಜ್ಯೋತ್ಸವ ವೇಳೆ ತ್ರಿವರ್ಣ ಧ್ವಜಾರೋಹಣ ಹಾಗೂ ಕನ್ನಡ ರಾಜ್ಯೋತ್ಸವದ ವೇಳೆ ಕನ್ನಡ ಧ್ವಜಾರೋಹಣಕ್ಕೆ ಮಾತ್ರ ಅವಕಾಶವಿರುತ್ತದೆ. ಆದರೆ ಗಣೇಶನ ಹಬ್ಬ ಆಚರಣೆಗೆ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಶಾಸಕ  ಜಮೀರ್ ಅಹ್ಮದ್ ಖಾನ್ ವಿವಾದಕ್ಕೆ ಕಾರಣರಾಗಿದ್ದರು.

SCROLL FOR NEXT