ಬೆಂಗಳೂರು: ಶಿಕ್ಷೆಯ ಹೆಸರಿನಲ್ಲಿ ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಗೊಳಪಡಿಸುವುದು ಸ್ವೀಕಾರಾರ್ಹವಲ್ಲ, ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ನರ್ಸರಿ ತರಗತಿಯ ಪುಟ್ಟ ಮಗುವಿಗೆ ಶಿಕ್ಷೆಯ ಹೆಸರಿನಲ್ಲಿ ಮಾನಸಿಕ ಹಿಂಸೆ ನೀಡಿದ ಪ್ರಕರಣದಲ್ಲಿ ಕೇಸು ದಾಖಲಾದ ಶಿಕ್ಷಕಿ ಮೇಲೆ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಈ ರೀತಿ ಹೇಳಿದ್ದು ಶಿಕ್ಷಕಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯಡಿ ಮಕ್ಕಳ ರಕ್ಷಣೆಯಡಿ ಆರೋಪ ಮಾಡಲಾಗಿದೆ.
ನಡೆದ ಘಟನೆಯೇನು?: ಬೆಂಗಳೂರಿನ ನರ್ಸರಿ ಶಾಲೆಯೊಂದರಲ್ಲಿ ಓದುತ್ತಿರುವ 5 ವರ್ಷದ ಪುಟ್ಟ ಬಾಲಕಿಯ ತಾಯಿ 2017ರ ಫೆಬ್ರವರಿ 24ರಂದು ದೂರು ದಾಖಲಿಸಿದ್ದರು. ತನ್ನ ಮಗಳು ಪ್ರತಿದಿನ ಮನೆಗೆ ಅಳುತ್ತಾ ಬರುತ್ತಿದ್ದು ಶಾಲೆಯಲ್ಲಿ ಶಿಕ್ಷಕಿ ಹೊಡೆದಿದ್ದಾರೆ ಎಂದು ಹೇಳುತ್ತಾಳೆ. ಕತ್ತಲೆ ಕೋಣೆಯಲ್ಲಿ ಕೂಡಿಹಾಕಿ ಸ್ವಲ್ಪ ಹೊತ್ತು ಕಳೆದ ನಂತರ ಹೊರಗೆ ಬಿಡುತ್ತಾರೆ ಎಂದು ಹೇಳುತ್ತಾಳೆ. ಬಾಲಕಿಯ ಪ್ಯಾಂಟ್ ತೆಗೆಯುವಂತೆ ಹೇಳುವುದು, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದನ್ನು ಮಾಡುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
41 ವರ್ಷದ ಶಿಕ್ಷಕಿ ವಿರುದ್ಧ ಪೊಲೀಸರು ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ವಿಶೇಷ ಕೋರ್ಟ್ ಮುಂದೆ ವಿಚಾರಣೆಗೆ ಬಾಕಿಯಿದ್ದ ಕೇಸು ನಿನ್ನೆ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂತು.
ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶ ಎಂ ನಾಗಪ್ರಸನ್ನ, ಶಿಕ್ಷಕ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಬೇಕು. ಚಿಕ್ಕಮಕ್ಕಳ ವಯಸ್ಸನ್ನು ಕೋಮಲಗೊಳಿಸಬೇಕು, ಪ್ರೀತಿಯಿಂದ ತಿದ್ದಿತೀಡಬೇಕು. ಶಿಕ್ಷಕರ ಕೈಯಲ್ಲಿ ಆಕ್ರಮಣಕಾರಿ ನಡವಳಿಕೆ ಅಥವಾ ಹಿಂಸಾಚಾರವನ್ನು ಅನುಭವಿಸುವ ಮಕ್ಕಳು ಸಾಮಾನ್ಯವಾಗಿ ಭಾವನಾತ್ಮಕ ಮತ್ತು ನಡವಳಿಕೆಯ ಸಮಸ್ಯೆಗಳನ್ನು ಬೆಳೆಸಿಕೊಳ್ಳುತ್ತಾರೆ, ಅವರ ಅರಿವಿನ ಕೌಶಲ್ಯಗಳು ಕಡಿಮೆಯಾಗುತ್ತವೆ. ಮಗುವಿನ ಮನಸ್ಸಿನ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತವೆ. ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಮಗುವಿನ ಮೇಲೆ ಯಾವುದೇ ಶಿಕ್ಷಕರ ಆಕ್ರಮಣವು ಕ್ಷಮಿಸಲಾಗದು ಎಂದರು.