ರಾಜ್ಯ

ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಲ್ಲಿ ಖಾದಿ ಜಾತ್ರೆ: ಬಿಎಂಆರ್‌ಸಿಎಲ್

Srinivasamurthy VN

ಬೆಂಗಳೂರು: ಸ್ವಾತಂತ್ರ್ಯೋತ್ಸವ ಅಂಗವಾಗಿ ಕೈಮಗ್ಗ ಮತ್ತು ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಮೆಟ್ರೋ ರೈಲು ನಿಲ್ದಾಣದಲ್ಲಿ ಖಾದಿ ಮಾರಾಟಕ್ಕೆ ಅನುವು ಮಾಡಿಕೊಡುತ್ತಿದೆ.

ಹೌದು.. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕೈಮಗ್ಗ ಮತ್ತು ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು 60ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಬೆಂಗಳೂರು ಸಂತೆ ಜಾಗದಲ್ಲಿ ತಮ್ಮ ಉತ್ಪನ್ನಗಳನ್ನು ಉಚಿತವಾಗಿ ಮಾರಾಟ ಮಾಡಲು ಅನುಮತಿ ನೀಡುತ್ತದೆ. ‘ಕುಶಲಕರ್ಮಿಗಳೊಂದಿಗೆ ಖಾದಿ ಪ್ರದರ್ಶನ’ ಆಗಸ್ಟ್ 15 ರಿಂದ 21 ರವರೆಗೆ ಒಂದು ವಾರ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ಈ ಕುರಿತು ಬಿಎಂಆರ್ ಸಿಎಲ್ ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ ಎಸ್ ಶಂಕರ್ ಅವರು, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನೊಂದಿಗೆ ಮಾತನಾಡಿದ್ದು, 'ಈಗಾಗಲೇ ಕರ್ನಾಟಕದಾದ್ಯಂತದ ಕುಶಲಕರ್ಮಿಗಳಿಂದ ಮಳಿಗೆಗಳನ್ನು ಕಾಯ್ದಿರಿಸಲಾಗಿದೆ. ಒಂದು ವಾರದವರೆಗೆ ನಮಗೆ ಯಾವುದೇ ಶುಲ್ಕವನ್ನು ಪಾವತಿಸದೆ ನಮ್ಮ ಜಾಗದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಅವರಿಗೆ ಅನುಮತಿಸಲಾಗುವುದು. ನಾವು ರಾಜ್ಯದಲ್ಲಿ ಗುಡಿ ಕೈಗಾರಿಕೆಯನ್ನು ಉತ್ತೇಜಿಸಲು ಬಯಸುತ್ತೇವೆ. ಸಂತೆಯಲ್ಲಿ ಸಣ್ಣ ತಿನಿಸುಗಳಿಗೂ ಅನುಮತಿ ನೀಡಲಾಗುವುದು ಎಂದರು.

ಅಂತೆಯೇ ಖಾದಿ ವಸ್ತುಗಳು, ಕಲೆ ಮತ್ತು ಕರಕುಶಲ ವಸ್ತುಗಳು, ಬಟ್ಟೆ, ಗೃಹಾಲಂಕಾರ, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಪುಗಳು, ಸಾವಯವ ಉತ್ಪನ್ನಗಳು, ಆಭರಣಗಳು, ಸೀರೆಗಳು, ಪುರುಷರು, ಮಹಿಳೆಯರು ಮತ್ತು ಮಕ್ಕಳ ಉಡುಪುಗಳು ಮತ್ತು ಇತರ ಉತ್ಪನ್ನಗಳು ನೇರವಾಗಿ ತಯಾರಕರಿಂದ ಗ್ರಾಹಕರಿಗೆ ಮಾರಟವಾಗಲಿವೆ. ಆ ಮೂಲಕ ಖಾದಿ ಉದ್ಯಮಕ್ಕೆ BMRCL ಪ್ರಚಾರ ಮಾಡಲಿದೆ ಎಂದರು.

SCROLL FOR NEXT