ರಾಜ್ಯ

ಕಲಬುರಗಿ: ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ದರೋಡೆಕೋರರ ಮೇಲೆ ಫೈರಿಂಗ್

Ramyashree GN

ಕಲಬುರಗಿ: ಕಲಬುರಗಿಯಲ್ಲಿ ಕಳೆದ ರಾತ್ರಿ ಗುಂಡಿನ ಸದ್ದು ಕೇಳಿಬಂದಿದ್ದು, ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಡಕಾಯಿತರ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದ ಹೊರವಲಯದ ಬಬಲಾದ ಕ್ರಾಸ್‌ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ.

ಗಾಯಗೊಂಡ ಡಕಾಯಿತರನ್ನು ಮಹಾರಾಷ್ಟ್ರದ ತುಳಜಾಪುರ ತಾಲೂಕಿನ (ಒಸ್ಮಾನಾಬಾದ್ ಜಿಲ್ಲೆ) ಝಳಕೋಲ್ ಗ್ರಾಮದ ಲವ ಮತ್ತು ದೇವಿದಾಸ್ ಎಂದು ಗುರುತಿಸಲಾಗಿದೆ.

ನೆರೆಯ ಮಹಾರಾಷ್ಟ್ರದಿಂದ ಬಂದಿದ್ದ ಜನರ ತಂಡವು ನಗರದ ವಿವಿಧ ಪ್ರದೇಶಗಳಿಗೆ ನುಗ್ಗಿ ದರೋಡೆ ಮಾಡುತ್ತಿತ್ತು. ಹಗಲಲ್ಲಿ ವಾಹನದ ಮೂಲಕ ದೇವರ ವಿಗ್ರಹಗಳನ್ನು ಹೊತ್ತುಕೊಂಡು ಸ್ಥಳಗಳ ಬಗ್ಗೆ ಅಧ್ಯಯನ ಮಾಡಲು ಭೇಟಿ ನೀಡುತ್ತಿತ್ತು ಮತ್ತು ರಾತ್ರಿಯಾಗುತ್ತಿದ್ದಂತೆ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂಗಳವಾರ ರಾತ್ರಿ 4 ಮಂದಿ ಡಕಾಯಿತರ ತಂಡವು ಬಿದ್ದಾಪುರ ಕಾಲೋನಿಯ ಮನೆಯೊಂದರಲ್ಲಿ ದರೋಡೆ ನಡೆಸುತ್ತಿತ್ತು. ಇದನ್ನು ಜನರು ಗಮನಿಸಿದ್ದಾರೆ. ಈ ವೇಳೆ ಪರಾರಿಯಾಗಲೂ ಯತ್ನಿಸಿದ ಗ್ಯಾಂಗ್‌ನಲ್ಲಿದ್ದ ಇಬ್ಬರನ್ನು ನಗರದ ಹೊರವಲಯದ ಬಬಲಾದ ಕ್ರಾಸ್ ಬಳಿ ಹಿಡಿಯುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.

ಬಳಿಕ ಬಂಧಿತ ದರೋಡೆಕೋರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಅಶೋಕ ನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಶಿವಶರಣ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಈವೇಳೆ ಅಶೋಕ ನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಪಂಡಿತ್ ಸಾಗರ್ ಅವರು ಆತ್ಮರಕ್ಷಣೆಗಾಗಿ ಇಬ್ಬರು ಡಕಾಯಿತರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನ್‌ಸ್ಟೆಬಲ್ ಶಿವಶರಣ ಅವರನ್ನು ಕೂಡ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿಗೆ ಕಲಬುರಗಿ ನಗರದಲ್ಲಿ ಮನೆಗಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಜನ ಆತಂಕದಲ್ಲಿದ್ದರು. ಇದೀಗ ಮಹಾರಾಷ್ಟ್ರ ಮೂಲದ ಇಬ್ಬರು ದರಡೋಕೋರರ ಮೇಲೆ ಪೊಲೀಸರು ಫೈರಿಂಗ್ ನಡೆಸಿರುವುದರಿಂದ ನಗರದ ಜನ ಕೊಂಚ ನಿರಾಳರಾಗಿದ್ದಾರೆ.

SCROLL FOR NEXT