ರಾಜ್ಯ

ರಾಜ್ಯಪಾಲರ ಪ್ರಶಸ್ತಿ ಆಮಿಷ ಒಡ್ಡಿ 1 ಲಕ್ಷ ರೂ. ವಂಚನೆ: ಇಬ್ಬರ ಬಂಧನ

Srinivasamurthy VN

ಬೆಂಗಳೂರು: ರಾಜಭವನದ ಅಧಿಕಾರಿ ಸೋಗಿನಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುತ್ತೇನೆಂದು ಆಮಿಷ ಒಡ್ಡಿ 1 ಲಕ್ಷ ರೂ ವಂಚನೆ ಮಾಡಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ತಾನು ರಾಜಭವನದ ಅಧಿಕಾರಿ ಎಂದು ಹೇಳಿಕೊಂಡ ಆರೋಪಿಗಳು ಸ್ವಾತಂತ್ರ್ಯ ಮಹೋತ್ಸವಕ್ಕೆ ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುವುದಾಗಿ ನಂಬಿಸಿ 1ಲಕ್ಷ ರೂ ಪಡೆದು ವಂಚಿಸಿದ್ದರು. ಈ ಕುರಿತು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಗೌಡ ಎಂಬುವವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಜ್ಞಾನ್ ಪ್ರಕಾಶ್ ಮತ್ತು ಗಿರಿಧರ್ ಎಂಬುವವರನ್ನು ಬಂಧಿಸಿದ್ದಾರೆ. 

ವೆಂಕಟೇಶ್ ಗೌಡ ಅವರು ದೂರಿರುವಂತೆ ಆರೋಪಿಗಳು ರಾಜಭವನಕ್ಕೆ ಕರೆದುಕೊಂಡು ಹೋಗಿ ಅಧಿಕಾರಿ ಎನ್ನುವಂತೆ ನಟಿಸಿದ್ದಾರೆ. ರಾಜ್ಯಪಾಲರ ಚೇಂಬರ್ ಒಳಗೆ ಹೋಗಿ ಅರ್ಧಗಂಟೆಗಳ ಕಾಲ ಮಾತನಾಡಿ ಆರೋಪಿಗಳು ಹೊರಬಂದಿದ್ದಾರೆ. 

 ವೆಂಕಟೇಶ್ ಗೌಡ ಎಂಬುವವರಿಗೆ ಸುರೇಶ್ ಎಂಬುವವರು ಕರೆ ಮಾಡಿದ್ದು, ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್​ರಿಂದ ಪ್ರಶಸ್ತಿ ಕೊಡಿಸುತ್ತೇನೆ. ಹೀಗಾಗಿ ದೇಣಿಗೆ ರೂಪದಲ್ಲಿ ಒಂದು ಲಕ್ಷ ರೂ.  ಹಣ ನೀಡಬೇಕೆಂದು ಸುರೇಶ್ ಬಾಬು ಕರೆ ಮಾಡಿದ್ದ. ಹೀಗಾಗಿ ಸುರೇಶ್ ಬಾಬು ಅವರ ಅಕೌಂಟ್​​ಗೆ ವೆಂಕಟೇಶ್ ಗೌಡ ಹಣ ಹಾಕಿದ್ದಾರೆ. ಆ ಹಣವನ್ನ ಜ್ಞಾನ ಪ್ರಕಾಶ್ ಹಾಗೂ ಗಿರಿಧರ್ ಎಂಬುವವರಿಗೆ ಟ್ರಾನ್ಸ್ ಫರ್ ಮಾಡಿರುವುದಾಗಿ ಸುರೇಶ್ ಬಾಬು ಹೇಳಿದ್ದಾರೆ.

ಆಗಸ್ಟ್ 16 ರಂದು ವೆಂಕಟೇಶ್ ಅವರು ಪ್ರಶಸ್ತಿಯ ಬಗ್ಗೆ ಪರಿಶೀಲಿಸಲು ರಾಜಭವನಕ್ಕೆ ಬಂದಿದ್ದರು. ಆಗ ನಂತರ ರಾಜಭವನದಲ್ಲಿ ರಾಜ್ಯಪಾಲರನ್ನ ಭೇಟಿ ಮಾಡಿದಲ್ಲಿ ಇದೊಂದು ಸಹಜ ಭೇಟಿ ಎಂದು ತಿಳಿದು ಬಂದಿತ್ತು. ಅಷ್ಟೆ ಅಲ್ಲದೆ ನಕಲಿ ಪುರಸ್ಕಾರದ ಪತ್ರವನ್ನೂ ನೀಡಿ ಆರೋಪಿಗಳು ವಂಚಿಸಿದ್ದಾರೆ. ಹೀಗಾಗಿ ಸುಳ್ಳು ಹೇಳಿ ಹಣ ಪಡೆದು ಸಹಜ ಭೇಟಿಗೆ ಪ್ರಶಸ್ತಿ ಪುರಸ್ಕಾರ ಎಂದು ಹೇಳಿ ವಂಚಿಸಿದ ಹಿನ್ನಲೆ ವಿಧಾನಸೌಧ ಪೊಲೀಸರಿಗೆ ವೆಂಕಟೇಶ್ ಗೌಡ ದೂರು ನೀಡಿದ್ದರು. 

ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಇಬ್ಬರನ್ನೂ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
 

SCROLL FOR NEXT