ಬೆಂಗಳೂರು: ಭಾರತೀಯ ಜನತಾ ಪಕ್ಷಕ್ಕೆ ರೌಡಿಗಳ ಮೇಲೆ ಆಸಕ್ತಿ ಇಲ್ಲ, ಅವರನ್ನು ಹತ್ತಿರಕ್ಕೆ ಸೇರಿಸುವುದಿಲ್ಲ, ಪಕ್ಷಕ್ಕೆ ಕೂಡ ಸೇರಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೌಡಿಗಳಿಗೆ, ರೌಡಿಶೀಟರ್ ಗಳಿಗೆ ಪಕ್ಷದಲ್ಲಿ ಯಾವುದೇ ಅವಕಾಶಗಳನ್ನು ಕೊಡುವುದಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಬಿಜೆಪಿ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದೆ. ರೌಡಿಗಳಿಗೆ, ಪಾತಕಿಗಳಿಗೆ ನಾವು ಬಾಗಿಲು ತೆರೆಯುವುದಿಲ್ಲ ಎಂದರು. ಇತ್ತೀಚೆಗೆ ಬಿಜೆಪಿ ಸಂಸದರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕುಖ್ಯಾತ ಪಾತಕಿ ಸೈಲಂಟ್ ಸುನಿಲ್ ಕೂಡ ಬಂದು ವೇದಿಕೆ ಹಂಚಿಕೊಂಡಿದ್ದನು.
ನಿನ್ನೆ ಸಚಿವ ಸೋಮಣ್ಣ ನಿವಾಸಕ್ಕೆ ವಿಲ್ಸನ್ ಗಾರ್ಡನ್ ನಾಗ ಬಂದಿದ್ದು ಅದು ಕೂಡ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಬಿಜೆಪಿ ನಾಯಕರ ಸಂಪರ್ಕಕ್ಕೆ ಬೆಂಗಳೂರಿನ ಅನೇಕ ರೌಡಿ ಶೀಟರ್ ಗಳು ಬರುತ್ತಿರುವುದು ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿಯನ್ನು ಮತ್ತು ಅದರ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.