ರಾಜ್ಯ

ನ್ಯಾಯಬೆಲೆ ಅಂಗಡಿಗಳ ಹಂಚಿಕೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

Manjula VN

ಬೆಂಗಳೂರು: ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸಂಬಂಧಿಸಿದ ಪ್ರಕರಣಗಳು, ವಿಶೇಷವಾಗಿ ನ್ಯಾಯಬೆಲೆ ಅಂಗಡಿಗಳು ಹಾಗೂ ಕಾರ್ಡ್‌ಗಳ ಹಂಚಿಕೆಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಆಯುಕ್ತರಿಗೆ ಈ ಸಮಸ್ಯೆಯನ್ನು ಪರಿಶೀಲಿಸಿ ಪರಿಹರಿಸುವಂತೆ ಸೂಚಿಸಿದೆ.

ರಾಜಾಜಿನಗರ ಶಾಸ್ತ ಮಹಿಳಾ ಸಂಘ ಸಲ್ಲಿಸಿದ್ದ ಮೇಲ್ಮನವಿ ಪ್ರಾಧಿಕಾರದ ನ್ಯಾಯಬೆಲೆ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ದೊಡ್ಡಬಿದರಕಲ್ಲಿನ ವಿಶೇಷಚೇತನ ಬಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಆದೇಶ ನೀಡಿದ್ದಾರೆ.

“ನ್ಯಾಯಬೆಲೆ ಅಂಗಡಿಗಳ ವಿವೇಚನಾರಹಿತ ಹಂಚಿಕೆ, ಕಾರ್ಡ್‌ಗಳ ವಿತರಣೆಯಲ್ಲಿನ ತಾರತಮ್ಯ ಈ ಸಮಸ್ಯೆಗೆ ಕಾರಣವಾಗಿದೆ. ಕಾರ್ಡ್‌ಗಳನ್ನು ಹಂಚಿಕೆ ಮಾಡುವಾಗ ಅಧಿಕಾರಿಗಳು ನಗರ ಪ್ರದೇಶದಲ್ಲಿ 800 ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ನ್ಯಾಯಬೆಲೆ ಅಂಗಡಿಗೆ ಇರಬೇಕು ಎಂಬ ಆದೇಶದ 11ನೇ ಕಲಂನಲ್ಲಿನ ಷರತ್ತುಗಳನ್ನು ಕಾಯ್ದುಕೊಳ್ಳಬೇಕು, ”ಎಂದು ನ್ಯಾಯಾಲಯ ತಿಳಿಸಿತು.

ಇದೇ ವೇಳೆ ದಾಖಲೆಗಳ ಪರಿಶೀಲನೆಯ ನಂತರವೇ ಜಾಗರೂಕತೆ ವಹಿಸಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವಂತೆ ಆಯುಕ್ತರು ಉಪನಿರ್ದೇಶಕರಿಗೆ ಸೂಚಿಸಿರುವ ಸೂಚನೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ಇದು ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ. ಪ್ರತಿ ಹಂಚಿಕೆಯ ನಂತರ, ದೂರು ಇದ್ದೇ ಇರುತ್ತದೆ. ರಿಟ್ ಅರ್ಜಿಗಳ ಮೂಲಕ ನ್ಯಾಯಾಲಯದ ಮುಂದೆ ಬರುತ್ತವೆ ಎಂದು ಹೇಳಿತು.

ಈ ವೇಳೆ ಮಾತನಾಡಿದ ಸರ್ಕಾರಿ ಪರ ವಕೀಲರು, ನಮ್ಮ ನೀತಿಯು 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಆಗಿದೆ. ಕಾರ್ಡ್ ಹೊಂದಿರುವವರು ಯಾವುದೇ ನ್ಯಾಯಬೆಲೆ ಡಿಪೋದಿಂದ ತಮ್ಮ ಪಡಿತರವನ್ನು ಪಡೆಯಬಹುದು ಎಂದು ಹೇಳಿದರು,

ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯವು ರಾಜ್ಯವು ನೀತಿಯನ್ನು ಮುಂದಕ್ಕೆ ಕೊಂಡೊಯ್ಯಲು, ಉಪನಿರ್ದೇಶಕರ ಅಧಿಕಾರಿಗಳು ಅಥವಾ ಅಂತಹ ವಿತರಣೆಯ ಉಸ್ತುವಾರಿ ಹೊಂದಿರುವ ಇತರ ಅಧಿಕಾರಿಗಳ ಇಚ್ಛೆ ಮತ್ತು ಅಭಿಮಾನದ ಮೇರೆಗೆ ಒಬ್ಬರಿಂದ ಪಡಿತರ ಚೀಟಿಗಳನ್ನು ತೆಗೆದುಕೊಂಡು ಇನ್ನೊಬ್ಬರಿಗೆ ನೀಡುತ್ತಿದೆ ಎಂದು ಹೇಳಿತು.

SCROLL FOR NEXT