ರಾಜ್ಯ

ರಾಯಚೂರು: ಸರ್ಕಾರಿ ಬಸ್ ಗೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಮೂವರ ಸಾವು

Shilpa D

ರಾಯಚೂರು: ತಾಲ್ಲೂಕಿನ ಗುಡದೂರು ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಸರ್ಕಾರಿ‌ ಬಸ್ ಬೈಕ್‌ಗೆ ಡಿಕ್ಕಿಯಾಗಿದ್ದರಿಂದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಯುವಕ‌ ಗಂಭೀರವಾಗಿ ಗಾಯಗೊಂಡ‌ ಘಟನೆ ಸೋಮವಾರ ತಡರಾತ್ರಿ ನಡೆದಿದೆ

ಆಂಧ್ರ ಪ್ರದೇಶದ ಮೂಲದ ನಾಗರಾಜ (25), ಸೀನು (30) ಹಾಗೂ ಜಯಪಾಲ ಮೃತ ದುರ್ದೈವಿಗಳು. ಮತ್ತೊಬ್ಬ ಶ್ರೀಕಾಂತ ಕರ್ನೂಲು ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಭತ್ತ ಕಟಾವು ಮಾಡಲು ಯಂತ್ರದ ಸಮೇತ ಮಸ್ಕಿಗೆ ಬಂದಿದ್ದರು. ಗುಡದೂರು ಗ್ರಾಮಕ್ಕೆ ಭತ್ತ ಕಟಾವು ಮಾಡಲು ಹೊರಟಾಗ ಅಪಘಾತ ಸಂಭವಿಸಿದೆ. ಒಂದೇ ಬೈಕ್ ಮೇಲೆ ನಾಲ್ವರು ಪ್ರಯಾಣ ಮಾಡುತ್ತಿದ್ದ ಶಂಕೆ ವ್ಯಕ್ತವಾಗಿದೆ.

ಯಾದಗಿರಿ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಅಪಘಾತ ಘಟನೆ ಬಳಿಕ ಚಾಲಕನು ನಿಲುಗಡೆ ಮಾಡದೆ, ಲಿಂಗಸುಗೂರಿನತ್ತ ಸಂಚರಿಸಿದ್ದ. ಬಸ್ ಹಿಂಬಾಲಿಸಿಕೊಂಡು ಹೋಗಿದ್ದ ಪಿಎಸ್‌ಐ ಸಿದ್ದರಾಮ‌ ಬಿದರಾಣಿ ಅವರು ಬಸ್ ವಶಕ್ಕೆ ತೆಗೆದುಕೊಂಡಿದ್ದಾರೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT