ರಾಜ್ಯ

ಗಡಿ ಗಲಾಟೆ: ಕರ್ನಾಟಕ ಬಸ್ಸಿಗೆ ಕಪ್ಪು ಮಸಿ ಬಳಿದ ಶಿವಸೇನೆ, ಎಂಇಎಸ್ ಕಾರ್ಯಕರ್ತರು, ಕರವೇ ಕಾರ್ಯಕರ್ತರ ವಿರುದ್ಧ ಎಫ್‍ಐಆರ್

Sumana Upadhyaya

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರತಿಭಟನೆ, ಗಲಾಟೆ ಜೋರಾಗಿದೆ. ಇಂದು ಬೆಳಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರ ವಿರುದ್ಧ ಬಸ್ಸು ಮೇಲೆ ಹತ್ತಿ ಕನ್ನಡ ಬಾವುಟ ಹಾರಿಸಿ ಆಕ್ರೋಶ ಹೊರಹಾಕಿದ್ದಾರೆ. ಬಸ್ಸಿನಲ್ಲಿ ಸಾಗಿ ಕರ್ನಾಟಕ ಪರ ತಮ್ಮ ರಾಜ್ಯಪ್ರೇಮವನ್ನು ಮೆರೆದು ಮರಾಠಿಗರ ವಿರುದ್ಧ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.

ಪದೇಪದೆ ಗಡಿ ಬಗ್ಗೆ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ವಿರುದ್ಧ ಕರವೇ ಆಕ್ರೋಶಗೊಂಡಿದೆ. ಗಡಿ, ಭಾಷೆ ವಿಚಾರದಲ್ಲಿ ಕನ್ನಡಿಗರನ್ನು ಕೆಣಕುತ್ತಿರುವ ಎಂಇಎಸ್​​, ಮಹಾರಾಷ್ಟ್ರ ರಾಜಕಾರಣಿಗಳ ನಡೆ ಖಂಡಿಸಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಯಲಿದೆ.

ಅತ್ತ ಮಹಾರಾಷ್ಟ್ರದಲ್ಲಿ ಪ್ರತಿಭಟನೆಯೇನು ಕಡಿಮೆಯಾಗಿಲ್ಲ. ಕಳೆದ ರಾತ್ರಿ ಡಿಪೊಗೆ ನುಗ್ಗಿ ಕರ್ನಾಟಕ ಸಾರಿಗೆ ಬಸ್ಸುಗಳಿಗೆ ಶಿವಸೇನೆ, ಮಹಾರಾಷ್ಟ್ರ ನವ ನಿರ್ಮಾಣ ವೇದಿಕೆ ಸದಸ್ಯರು ಕಪ್ಪು ಮಸಿ ಬಳಿದು ವಿಕೃತಿ ಮೆರೆದಿದ್ದಾರೆ. 

ಸಿಂಧದುರ್ಗದಲ್ಲಿ ಎಂಇಎಸ್ ಕಾರ್ಯಕರ್ತರು ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಮರಾಠಿಯಲ್ಲಿ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದಿದ್ದಾರೆ. 

ಪ್ರಕರಣ ದಾಖಲು: ಮಹಾರಾಷ್ಟ್ರ ಲಾರಿಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರ ವಿರುದ್ಧ ಬೆಳಗಾವಿ ತಾಲೂಕಿನ ‌ಹಿರೇಬಾಗೇವಾಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 8 ರಿಂದ 12 ಕರವೇ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ನಿನ್ನೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡದಿದ್ದಕ್ಕೆ ಕರವೇ ಆಕ್ರೋಶ ವ್ಯಕ್ತಪಡಿಸಿತ್ತು. ಹಿರೇಬಾಗೇವಾಡಿ ಟೋಲ್‌ಗೇಟ್ ಬಳಿ ಕಲ್ಲು ತೋರಾಟ ನಡೆಸಲಾಗಿತ್ತು. ಮಹಾರಾಷ್ಟ್ರ ನೋಂದಣಿಯ ಲಾರಿಯ ಮೇಲೆ ಕಲ್ಲು ತೂರಿ ಗಾಜು ಪುಡಿ ಪುಡಿ ಮಾಡಲಾಗಿತ್ತು. ಕೆಲವು ವಾಹನಗಳ ನಂಬರ್ ಪ್ಲೇಟ್ ಕಿತ್ತು, ಮಸಿ ಬಳಿದು ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿ ತಕ್ಷಣವೇ ಗುಂಪಿನಲ್ಲಿ ಓಡಿ ಹೋಗಿದಕ್ಕೆ ಗುರುತು ಪತ್ತೆಯಾಗದೆ ಬಂಧನ ಸಾಧ್ಯವಾಗಿಲ್ಲ. ಆದರೆ ಐಪಿಸಿ ಸೆಕ್ಷನ್ 143, 147, 341, 427, 149 ಅಡಿ 12 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಹಿರೇಬಾಗೇವಾಡಿ ಠಾಣೆಯಲ್ಲಿ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.

SCROLL FOR NEXT