ರಾಜ್ಯ

ಲವ್ ಜಿಹಾದ್ ತಡೆಗೆ ಪ್ರತ್ಯೇಕ ಕಾನೂನು ಅಗತ್ಯವಿಲ್ಲ, ರಾಜ್ಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಕೇಂದ್ರ ಅನುಮತಿ: ಆರಗ ಜ್ಞಾನೇಂದ್ರ

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಮಟ್ಟದ ವಿಧಿವಿಜ್ಞಾನ ಪ್ರಯೋಗಾಲಯ(FSL) ತಲೆಯೆತ್ತಲಿದೆ. ಪ್ರಯೋಗಾಲಯ ಸ್ಥಾಪನೆಗೆ ಕೇಂದ್ರ ಗೃಹ ಸಚಿವಾಲಯ ಸಂಬಂಧಪಟ್ಟ ಅನುಮತಿ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಚಿತ್ರದುರ್ಗದಲ್ಲಿ ತಿಳಿಸಿದ್ದಾರೆ.

ಚಿತ್ರದುರ್ಗದ ಐಮಂಗಲದಲ್ಲಿ ಮಾತನಾಡಿದ ಅವರು, ಇದುವರೆಗೆ ವಿಧಿವಿಜ್ಞಾನ ಪ್ರಯೋಗಕ್ಕೆ ಹೈದರಾಬಾದ್ ಅಥವಾ ಬೇರೆ ರಾಜ್ಯಕ್ಕೆ ಕಳುಹಿಸಬೇಕಾಗಿತ್ತು. ರಾಜ್ಯದಲ್ಲಿ ಸ್ಥಾಪನೆಯಾದರೆ ವಿಧಿವಿಜ್ಞಾನ ಪರೀಕ್ಷೆಗೆ ಸುಲಭವಾಗಲಿದೆ, ಸ್ಥಳ ಆಯ್ಕೆ ಇನ್ನೂ ತೀರ್ಮಾನವಾಗಿಲ್ಲ ಎಂದರು.

ಲವ್ ಜಿಹಾದ್  ತಡೆಗೆ ರಾಜ್ಯದಲ್ಲಿ ಪ್ರತ್ಯೇಕ ಕಾನೂನು ರೂಪಿಸುವ ಹಾಗೂ ವಿಶೇಷ ಕಾರ್ಯಪಡೆ ರಚಿಸುವ ಅಗತ್ಯವಿಲ್ಲ. ಲವ್ ಜಿಹಾದ್ ತಡೆಗೆ ಪ್ರತ್ಯೇಕ ಕಾನೂನು ರೂಪಿಸಲು ಸಂಘಪರಿವಾರದ ಸಂಘಟನೆಗಳು ಮನವಿ ಮಾಡಿವೆ. ರಾಜ್ಯದಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಯಲ್ಲಿ ಈ ಅಂಶ ಅಡಕವಾಗಿದೆ. ಹೀಗಾಗಿ ಪ್ರತ್ಯೇಕ ಕಾನೂನು ರೂಪಿಸುವ ಅನಿವಾರ್ಯತೆಯಿಲ್ಲ. ಆದರೂ ಪರಿಶೀಲನೆ ಮಾಡಲಾಗುವುದು ಎಂದರು.

ಜನರಿಗೆ ತಮ್ಮ ಇಷ್ಟದ ಧರ್ಮ ಅನುಸರಿಸಲು ಸಂವಿಧಾನದಲ್ಲಿ ಅವಕಾಶವಿದೆ, ಧರ್ಮ ಅನುಸರಿಸುವ ಮುನ್ನ ಅರ್ಜಿ ಸಲ್ಲಿಸಬೇಕು. ಬಲವಂತದ ಅಥವಾ ಆಮಿಷದ ಮತಾಂತರವಾಗಬಾರದು. ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆ ಆಮಿಷದ ಮತಾಂತರ ಅವ್ಯಾಹತವಾಗಿ ನಡೆಯುತ್ತಿದ್ದು ಮಠಾಧೀಶರ ಕೋರಿಕೆ ಮೇರೆಗೆ ಕಾನೂನು ರೂಪಿಸಲಾಗಿದೆ. ಮತಾಂತರಕ್ಕೆ ಸಂಬಂಧಿಸಿದಂತೆ ರಕ್ತ ಸಂಬಂಧಿಗಳು ದೂರ ನೀಡಬೇಕು ಎಂದರು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳೊಂದಿಗೆ ದೆಹಲಿಗೆ ಹೋಗುತ್ತಿರುವುದಾಗಿ ತಿಳಿಸಿದರು. ಗಡಿ ಮತ್ತು ಗೃಹ ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಹೋಗುತ್ತಿರುವುದೇ ಹೊರತು ಬೇರೆ ರಾಜಕೀಯ ವಿಷಯಗಳಿಗಲ್ಲ ಎಂದರು.

ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಮಾಡಲಿ ತಿರುಪತಿ ಯಾತ್ರೆ ಮಾಡಲಿ ಯಾವುದೇ ಪ್ರಯೋಜನವಿಲ್ಲ, ಕಾಂಗ್ರೆಸ್ ನ್ನು ಈ ಬಾರಿ ರಾಜ್ಯದ ಜನತೆ ಸೋಲಿಸುವುದು ನಿಶ್ಚಿತ ಎಂದರು.

SCROLL FOR NEXT