ರಾಜ್ಯ

4 ಸಂಚಾರ ಪೊಲೀಸ್ ಠಾಣೆಗಳ ಆರಂಭಕ್ಕೆ ಗೃಹ ಇಲಾಖೆ ಆದೇಶ

Manjula VN

ಬೆಂಗಳೂರು: ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಮತ್ತೊಂದು ಕ್ರಮವಾಗಿ 4 ಹೊಸ ಸಂಚಾರ ಪೊಲೀಸ್ ಠಾಣೆಗಳು ಮತ್ತು ಎರಡು ಸಂಚಾರ ಉಪವಿಭಾಗಗಳನ್ನು ತೆರೆಯಲು ಸಿಬ್ಬಂದಿಯನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ನಗರದಲ್ಲಿ ಎರಡು ಸೇರಿದಂತೆ ರಾಜ್ಯಾದ್ಯಂತ ಏಳು ಪೊಲೀಸ್ ಉಪ ವಿಭಾಗಗಳನ್ನು ಸ್ಥಾಪಿಸಲು ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಇತ್ತೀಚೆಗೆ ವಿಸರ್ಜಿಸಲಾದ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ಹೊಸ ಠಾಣೆಗಳಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಗುರುವಾರ ಹೊರಡಿಸಿರುವ ಆದೇಶದಂತೆ ತಲಘಟ್ಟಪುರ, ಬೆಳ್ಳಂದೂರು, ಹೆಣ್ಣೂರು ಮತ್ತು ಮಹದೇವಪುರದಲ್ಲಿ ಚಾರ ಠಾಣೆಗಳನ್ನು ತೆರೆಯಲಾಗುತ್ತಿದೆ.

ಬೆಳ್ಳಂದೂರು ಮತ್ತು ಮಹದೇವಪುರದಲ್ಲಿ ಅನೇಕ ಐಟಿ ಕಂಪನಿಗಳಿವೆ ಮತ್ತು ಇಲ್ಲಿ ಹೊಸ ಟ್ರಾಫಿಕ್ ಪೊಲೀಸ್ ಠಾಣೆಗಳ ಸ್ಥಾಪಿಸುವುದರಿಂದ ಟೆಕ್-ಕಾರಿಡಾರ್‌ನಲ್ಲಿ ಉತ್ತಮ ಟ್ರಾಫಿಕ್ ನಿರ್ವಹಣೆ ಮಾಡುವ ಗುರಿಯನ್ನು ಹೊಂದಲಾಗಿದೆ.

ತಲಘಟ್ಟಪುರ ಮತ್ತು ಬೆಳ್ಳಂದೂರು ಠಾಣೆಗಳಿಗೆ ತಲಾ 43 ಸಿಬ್ಬಂದಿ ಹಾಗೂ ಹೆಣ್ಣೂರು ಮತ್ತು ಮಹದೇವಪುರ ಠಾಣೆಗಳಿಗೆ ಕ್ರಮವಾಗಿ 42 ಮತ್ತು 37 ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ.

ವಿಶೇಷ ಪೊಲೀಸ್ ಕಮಿಷನರ್ (ಸಂಚಾರ) ಎಂಎ ಸಲೀಂ ಅವರು ಮಾತನಾಡಿ, ನಾಲ್ಕು ಹೊಸ ಸಂಚಾರಿ ಪೊಲೀಸ್ ಠಾಣೆಗಳು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ.

ಠಾಣೆಗಳ ಸ್ಥಾಪನೆಗೆ ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ನ್ಯಾಯವ್ಯಾಪ್ತಿಯ ಅಧಿಸೂಚನೆಯನ್ನು ನೀಡಲಾಗುವುದು, ನಂತರ ಠಾಣೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ ಎಂದು ತಿಳಿಸಿದ್ದಾರೆ.

ಅಲ್ಲದೆ, ವಿಜಯನಗರ ಮತ್ತು ಎಚ್‌ಎಸ್‌ಆರ್ ಲೇಔಟ್ ಸಂಚಾರ ಉಪವಿಭಾಗಗಳನ್ನು ರಚಿಸಲಾಗಿದ್ದು, ಪೀಣ್ಯ ಮತ್ತು ಕೆಂಗೇರಿಗೆ ಎರಡು ಹೊಸ ಕಾನೂನು ಮತ್ತು ಸುವ್ಯವಸ್ಥೆ ಉಪವಿಭಾಗಗಳನ್ನು ಮಂಜೂರು ಮಾಡಲಾಗಿದೆ.

ಮೈಸೂರು ನಗರದಲ್ಲಿ ವಿಜಯನಗರ ಉಪ ವಿಭಾಗ, ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ–2 ಉಪ ವಿಭಾಗ, ಹಾಸನ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ಉಪ ವಿಭಾಗ, ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ ಗ್ರಾಮಾಂತರ ಉಪ ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ಉಪ ವಿಭಾಗಗಳನ್ನು ತೆರೆಯಲಾಗಿದೆ.

ಏತನ್ಮಧ್ಯೆ, ವೃತ್ತ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿದ್ದ 40 ಠಾಣೆಗಳನ್ನು ಪೊಲೀಸ್‌ ಇನ್‌ಸ್ಪೆಕ್ಟರ್‌ ನೇತೃತ್ವದ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

SCROLL FOR NEXT