ಬೆಳಗಾವಿ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನವರೆಗೆ ಕಾಯುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಚನೆ ನೀಡಿದ್ದರೂ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾಮೇಳಾವವನ್ನು ಮುಂದುವರಿಸಲು ನಿರ್ಧರಿಸಿದೆ.
ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಎಂಇಎಸ್ ಮಹಾಮೇಳಾವವನ್ನು ನಡೆಸುತ್ತಿದೆ. ಈ ಮಹಾಮೇಳಾವದಲ್ಲಿ ಕರ್ನಾಟಕದ ಹಲವಾರು ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಲಾಗುತ್ತದೆ.
ಬೆಳಗಾವಿ, ನಿಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸೇರಿದಂತೆ ಗಡಿಭಾಗದಲ್ಲಿರುವ ಕರ್ನಾಟಕದ ಹಲವು ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸುವುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ: ಮೊದಲ ಬಾರಿಗೆ ಗಡಿ ವಿವಾದ ಸಂಬಂಧ ಕೇಂದ್ರ ಸ್ಪಂದಿಸಿದೆ: ಅಮಿತ್ ಶಾ ನಡೆಗೆ ಮಹಾ ಸಿಎಂ ಪ್ರಶಂಸೆ, ಉದ್ಧವ್ ಗೆ ಟಾಂಗ್!
“ಡಿಸೆಂಬರ್ 19 ರಂದು ಬೆಳಗಾವಿಯಲ್ಲಿ ಮಹಾಮೇಳವನ್ನು ನಡೆಸಲು ನಾವು ದೃಢವಾಗಿದ್ದೇವೆ. ಕರ್ನಾಟಕ ಬೆಳಗಾವಿಯಲ್ಲಿ 10 ದಿನಗಳ ಚಳಿಗಾಲದ ಅಧಿವೇಶನ ನಡೆಸುತ್ತಿರುವಾಗ ನಾವೇಕೆ ಸಮಾನಾಂತರ ಅಧಿವೇಶನ ನಡೆಸಬಾರದು ಎಂದು ಎಂಇಎಸ್ನ ಉನ್ನತ ನಾಯಕ ಹಾಗೂ ಮಾಜಿ ಶಾಸಕ ಮನೋಹರ್ ಕಿಣೇಕರ್ ಪ್ರಶ್ನಿಸಿದ್ದಾರೆ.
ಸಮಾನಾಂತರ ಅಧಿವೇಶನವನ್ನು ನಡೆಸುವುದು ನ್ಯಾಯಾಂಗ ನಿಂದನೆಗೆ ಸಮಾನವಾದರೆ, ಚಳಿಗಾಲದ ಅಧಿವೇಶನವೂ ಆಗುತ್ತದೆ ಎಂದು ಅವರು ಹೇಳಿದರು,
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಶಾ ಹೇಳಿದ ಅಂಶಗಳು ಗಡಿ ವಿವಾದದ ಬಗ್ಗೆ ಸ್ಪಷ್ಟತೆಗೆ ಸಹಾಯ ಮಾಡಲಿಲ್ಲ. “ಮಹಾಮೇಳಕ್ಕೆ ನಾವು ಈಗಾಗಲೇ ಮಹಾರಾಷ್ಟ್ರದ ಎಲ್ಲ ಪ್ರಮುಖ ನಾಯಕರನ್ನು ಆಹ್ವಾನಿಸಿದ್ದೇವೆ. ಅಮಿತ್ ಶಾ ಹೇಳಿದಂತೆ ಎರಡೂ ಕಡೆಯವರು ಯಥಾಸ್ಥಿತಿ ಕಾಯ್ದುಕೊಳ್ಳಬೇಕಾದರೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಎರಡೂ ರಾಜ್ಯಗಳು ಯಥಾಸ್ಥಿತಿ ಕಾಯ್ದುಕೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ಪ್ರಮುಖರ ಹಾಜರಾತಿಯನ್ನು ಲೆಕ್ಕಿಸದೆ ನಾವು ಈ ಮಹಾಮೇಳಾವವನ್ನು ನಡೆಸುತ್ತೇವೆ ಎಂದು ಎಂಇಎಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖ್ಯಾತ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, ಎರಡೂ ಕಡೆಯವರು ಒಪ್ಪಿಕೊಂಡಿರುವ ಷರತ್ತುಗಳ ಪ್ರಕಾರ ಡಿಸೆಂಬರ್ 19 ರಂದು ಎಂಇಎಸ್ನ ಸಮಾನಾಂತರ ಅಧಿವೇಶನ ಸೇರಿದಂತೆ ಗಡಿಯಲ್ಲಿ ಆಯೋಜಿಸುವ ಕರ್ನಾಟಕ ವಿರೋಧಿ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರದ ಯಾವುದೇ ನಾಯಕರು ಭಾಗವಹಿಸಬಾರದು ಎಂದು ಹೇಳಿದರು.
ಆದರೆ, ರಾಜ್ಯ ಸರಕಾರವು ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ನಡೆಸಲು ಉದ್ದೇಶಿಸಿರುವ ಎಂಇಎಸ್ಗೆ ಸಮಾನಾಂತರ ಅಧಿವೇಶನ ನಡೆಸಲು ಇನ್ನೂ ಅನುಮತಿ ನೀಡಿಲ್ಲ.