ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್ಎಸ್ಬಿ) ಹೊರಗುತ್ತಿಗೆ ನೌಕರರು ಸಾರ್ವಜನಿಕರಿಂದ ನೀರಿನ ಕಂದಾಯವನ್ನು ನಗದಾಗಿ ಪಡೆದುಕೊಂಡು ಕಳೆದ 5 ವರ್ಷಗಳಿಂದ ಮಂಡಳಿಗೆ ವಂಚಿಸಿದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.
ಕಳೆದ ಐದು ವರ್ಷಗಳಿಂದ ನಗರದಾದ್ಯಂತ ಈ ಹಗರಣ ನಡೆಯುತ್ತಿದ್ದು, ಸುಮಾರು 1.5 ಕೋಟಿ ರೂಪಾಯಿ ದುರುಪಯೋಗಪಡಿಸಿಕೊಂಡಿರುವುದು ಕಂಡು ಬಂದಿದೆ. ಈ ಸಂಬಂಧ ಐದು ಎಫ್ಐಆರ್ಗಳು ದಾಖಲಾಗಿದ್ದು, ನಾಲ್ವರು ಗುತ್ತಿಗೆ ಸಿಬ್ಬಂದಿಯನ್ನು ಬಂಧನಕ್ಕೊಳಪಡಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಜಲಮಂಡಳಿಯು ಎಲ್ಲಾ ಹಂತಗಳಲ್ಲಿ ಹೊರಗುತ್ತಿಗೆ ಸಂಸ್ಥೆಯಾದ ನವೋದಯಂನಿಂದ 2,700 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಈ ಸಿಬಿಬಂದಿಗಳು ಉತ್ತಮ ಸಂಖ್ಯೆಯ ಆದಾಯ ಸಂಗ್ರಹಣೆಯನ್ನು ನೋಡಿಕೊಳ್ಳುತ್ತದೆ.
ಇದನ್ನೂ ಓದಿ: ಬೆಂಗಳೂರು: ನೀರು ಪೂರೈಕೆ ಸ್ಥಗಿತ; ಮಹಿಳೆಗೆ 55,000 ರೂ. ಪರಿಹಾರ ಪಾವತಿಸುವಂತೆ ಬಿಡಬ್ಲ್ಯುಎಸ್ಎಸ್ಬಿಗೆ ನಿರ್ದೇಶನ
ಹೊರಗುತ್ತಿಗೆ ನೌಕರರು ಮತ್ತು ಬಿಡಬ್ಲ್ಯುಎಸ್ಎಸ್ಬಿಯ ಕೆಲವು ಪ್ರಥಮ ಮತ್ತು ಎರಡನೇ ವಿಭಾಗದ ಸಹಾಯಕರ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕೆಲವು ಟೆಂಡರ್ಗಳಿಗೆ ಸಂಬಂಧಿಸಿದಂತೆ ಜಲಮಂಡಳಿ ನೀಡಿದ ರಸೀದಿಗಳನ್ನು ಪರಿಶೀಲಿಸಿದಾಗ ಹಿರಿಯ ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳು ಹಗರಣವನ್ನು ಪತ್ತೆ ಮಾಡಿದ್ದಾರೆ.
ನವೋದಯಂ ನೌಕರರು 2017 ರಿಂದ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ನಮ್ಮ ಎಫ್ಐಆರ್ಗಳಿಂದಾಗಿ ಅವರ ನಾಲ್ವರು ಉದ್ಯೋಗಿಗಳು ಈಗ ಜೈಲಿನಲ್ಲಿದ್ದಾರೆ. ದಂಧೆಯಲ್ಲಿ ಭಾಗಿಯಾಗಿರುವ ನಮ್ಮ ಕ್ಲರಿಕಲ್ ಕೇಡರ್ನ ಮೂವರು ಉದ್ಯೋಗಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಹಗರಣದ ಬಳಿಕ ಇದೀಗ ನಮ್ಮ ಉಪ-ಕೇಂದ್ರಗಳಾದ್ಯಂತ ವಿವರವಾದ ಲೆಕ್ಕ ಪರಿಶೋಧನೆಗಳನ್ನು ನಡೆಸಲು ಮುಂದಾಗಿದ್ದೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಡಬ್ಲ್ಯುಎಸ್ಎಸ್ ಬಿ ಗೆ ಬರಬೇಕಿದೆ 355 ಕೋಟಿ ರೂಪಾಯಿ ಬಾಕಿ ಮೊತ್ತ: ಸರ್ಕಾರಿ ಇಲಾಖೆಗಳೇ ಮುಂಚೂಣಿ ಸುಸ್ತಿದಾರರು!
ದಂಧೆ ಯಾವ ರೀತಿ ನಡೆದಿದೆ ಎಂಬುದರ ಕುರಿತು ವಿವರಗಳನ್ನು ನೀಡಿದ ಹಿರಿಯ ಅಧಿಕಾರಿಯೊಬ್ಬರು, ಬಿಡಬ್ಲ್ಯುಎಸ್ಎಸ್ಬಿ ಬಿಲ್ ಪಾವತಿಗಳನ್ನು ಆನ್ಲೈನ್ ಅಥವಾ ಡಿಜಿಟಲ್ ಮೋಡ್ ಅಥವಾ ಅದರ ಕಿಯೋಸ್ಕ್ಗಳಲ್ಲಿ ಮಾತ್ರ ಸ್ವೀಕರಿಸಲಾಗುತ್ತಿದೆ. ನೋಟು ರದ್ದತಿಯ ನಂತರ, ನಾವು ಜನವರಿಯಿಂದ ಮಾರ್ಚ್ 2017 ರವರೆಗೆ ಮೂರು ತಿಂಗಳ ಕಾಲ ಪಾವತಿಗಳನ್ನು ಹಸ್ತಚಾಲಿತವಾಗಿ ಸ್ವೀಕರಿಸಲು ಅನುಮತಿ ನೀಡಿದ್ದೆವು. ಈ ಸಂದರ್ಭದಲ್ಲಿ ಹಗರಣಗಳು ನಡೆದಿವೆ ಎಂದು ಹೇಳಿದ್ದಾರೆ.
ಏಪ್ರಿಲ್ನಿಂದ, ಕಿಯೋಸ್ಕ್ಗಳನ್ನು ಮೇಲ್ದರ್ಜೆಗೇರಿಸಲಾಯಿತು ಮತ್ತು ಕೈಯಿಂದ ಸಂಗ್ರಹಣೆಯನ್ನು ನಿಲ್ಲಿಸುವಂತೆ ಎಲ್ಲರಿಗೂ ಸೂಚಿಸಲಾಗಿತ್ತು. ಆದಾಗ್ಯೂ, ಕೆಲವು ಹೊರಗುತ್ತಿಗೆ ನೌಕರರು, ಕ್ಲೆರಿಕಲ್ ಸಿಬ್ಬಂದಿಯಿಂದ ಸಹಾಯ ಪಡೆದುಕೊಂಡು ಈ ರೀತಿಯ ಪಾವತಿಯನ್ನು ಮುಂದುವರೆಸಿದ್ದಾರೆಂದು ತಿಳಿಸಿದ್ದಾರೆ.
“ಏಪ್ರಿಲ್ 2017 ರಿಂದ ಈ ವರ್ಷದ ಡಿಸೆಂಬರ್ ಮಧ್ಯದವರೆಗೆ ಮಾಡಿದ ಸಂಗ್ರಹಗಳಿಗೆ ರಸೀದಿಗಳನ್ನು ನೀಡಲಾಗಿಲ್ಲ, ಅಧಿಕೃತ ಬಿಡಬ್ಲ್ಯುಎಸ್ಎಸ್ಬಿ ಪ್ರಾಧಿಕಾರದಲ್ಲಿ ಸಂಗ್ರಹಣೆಗಳನ್ನು ಠೇವಣಿ ಮಾಡಲಾಗಿಲ್ಲ. ಉಪ-ಕೇಂದ್ರಗಳಲ್ಲಿನ ನಗದು ಪುಸ್ತಕದಲ್ಲಿ ಯಾವುದೇ ನಮೂದುಗಳನ್ನು ಮಾಡಲಾಗಿಲ್ಲ. ಹಣ ಪಡೆದಿದ್ದಕ್ಕೆ ಪುರಾವೆಗಳಿಲ್ಲ. ಎಇಇಗಳಿಗೂ ತಮ್ಮ ಗುರುತಿನ ಚೀಟಿಗಳ ದುರ್ಬಳಕೆಯ ಬಗ್ಗೆ ತಿಳಿದಿರಲಿಲ್ಲ ಎಂದಿದ್ದಾರೆ.
ಈ ನಡುವೆ ಬಿಡಬ್ಲ್ಯುಎಸ್ಎಸ್ಬಿ ಮುಖ್ಯ ಆಡಳಿತಾಧಿಕಾರಿ ಆರ್ ವೀಣಾ ಅವರನ್ನು ಸಂಪರ್ಕಿಸಿದಾಗ ಉಪ ಕೇಂದ್ರಗಳ ಪಟ್ಟಿಗಳನ್ನು ನೀಡಿದರು. ಆದರೆ, ಹಗರಣ ಕುರಿತು ಹೆಚ್ಚು ಮಾಹಿತಿ ಕೇಳಿದಾಗ ಮಾಧ್ಯಮದ ವಿರುದ್ಧವೇ ಸಿಡಿಮಿಡಿಗೊಂಡರು.
ಹಗರಣ ಕುರತು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ಜಯರಾಮ್ ಅಥವಾ ಇತರೆ ಉನ್ನತ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ.