ರಾಜ್ಯ

ವಶಿಷ್ಠ ಸೌಹಾರ್ದ ಸಹಕಾರ ಸಂಘದ ಠೇವಣಿದಾರರಿಗೆ 26.97 ಕೋಟಿ ರೂ. ಠೇವಣಿ ಹಣ ಮರುಪಾವತಿ: ಎಸ್.ಟಿ.ಸೋಮಶೇಖರ್

Nagaraja AB

ಬೆಳಗಾವಿ: ಬೆಂಗಳೂರು ನಗರದ ಶ್ರೀ ವಶಿಷ್ಠ ಸೌಹಾರ್ದ ಸಹಕಾರ ಸಂಘದ ಅವ್ಯವಹಾರದ ಕುರಿತು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, 729 ಠೇವಣಿ ಖಾತೆಗಳನ್ನು ಮುಕ್ತಾಯಗೊಳಿಸಿ 26.97 ಕೋಟಿ ರೂ. ಠೇವಣಿ ಹಣವನ್ನು ಮರುಪಾವತಿಸಲಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ವಿಧಾನಪರಿಷತ್ ನಲ್ಲಿಂದು ತಿಳಿಸಿದರು

ವಿಧಾನಪರಿಷತ್ ಸದಸ್ಯ ಯು.ಬಿ‌.ವೆಂಕಟೇಶ್ ಅವರ  ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ನಗರದ ಶ್ರೀ ವಶಿಷ್ಠ ಸೌಹಾರ್ದ ಸಹಕಾರ ಸಂಘದ ಅವ್ಯವಹಾರ ಪ್ರಕರಣದ ಸಿಐಡಿ ವಿಚಾರಣೆ ಪ್ರಗತಿಯಲ್ಲಿದೆ. ಠೇವಣಿದಾರರಿಗೆ ಠೇವಣಿ ಹಣ ಹಿಂದಿರುಗಿಸಲು ಸರ್ಕಾರದಿಂದ "ಸಕ್ಷಮ ಪ್ರಾಧಿಕಾರ" ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದರು.

2013-14ರಿಂದ 2014-15ನೇ ಸಾಲಿನವರೆಗಿನ ಲೆಕ್ಕಪತ್ರಗಳ ಮರು ಲೆಕ್ಕ ಪರಿಶೋಧನೆ ಪೂರ್ಣಗೊಳಿಸಿದ್ದು, ವರದಿ ಬಿಡುಗಡೆ ಬಾಕಿ ಇರುತ್ತದೆ. 2015-16ರಿಂದ 2019-20ರವರೆಗೆ ಮರು ಲೆಕ್ಕ ಪರಿಶೋಧನೆ  ನಡೆಯುತ್ತಿರುತ್ತದೆ ಎಂದು ಮಾಹಿತಿ ನೀಡಿದರು.

ಅಂದಾಜು 2000 ಠೇವಣಿದಾರರಿಗೆ ಅಂದಾಜು 260 ಕೋಟಿ ರೂ. ಠೇವಣಿ ಹಣ ಪಾವತಿಸಬೇಕಾಗಿರುತ್ತದೆ. ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯು ಕೈಗೊಂಡಿರುವ ಪರಿವೀಕ್ಷಣಾ ವರದಿಯ ಪ್ರಕಾರ ಅಂದಾಜು 280 ಕೋಟಿ ರೂ. ಅವ್ಯವಹಾರವಾಗಿರುವುದು ಕಂಡುಬಂದಿರುತ್ತದೆ. ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

SCROLL FOR NEXT