ರಾಜ್ಯ

2ಎ ಮೀಸಲಾತಿಗೆ ಆಗ್ರಹ: ಬೆಳಗಾವಿಯಲ್ಲಿಂದು 'ಪಂಚಶಕ್ತಿ ಪಂಚಮಸಾಲಿ ಸಮಾವೇಶ', ಭದ್ರತೆ ಹೆಚ್ಚಿಸಿದ ಅಧಿಕಾರಿಗಳು

Manjula VN

ಬೆಳಗಾವಿ: ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡುತ್ತಿರುವ ಪಂಚಮಸಾಲಿ ಸಮುದಾಯದ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಗುರುವಾರ ಸಮಾಜದಿಂದ ಪಂಚಶಕ್ತಿ ವಿರಾಟ್ ಬೃಹತ್ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭವನ್ನು ಪಂಚಮಸಾಲಿ ಸಮುದಾಯ ಹಕ್ಕೊತ್ತಾಯಕ್ಕಾಗಿ ಬಳಸಿಕೊಂಡಿದ್ದು, ʻಮೀಸಲಾತಿ ಕೊಟ್ಟರೆ ತುಲಾಭಾರ, ಇಲ್ಲವೇ ಸೌಧಕ್ಕೆ ಮುತ್ತಿಗೆʼ ಎಂಬ ಎಚ್ಚರಿಕೆಯನ್ನು ನೀಡಿದೆ.

ಡಿಸೆಂಬರ್ 19ರ ಒಳಗಾಗಿ ಮೀಸಲಾತಿ ಕೊಡಬೇಕು ಎಂದು ಸರ್ಕಾರಕ್ಕೆ ಕೂಡಲಸಂಗಮ ಜಯಮೃತ್ಯುಂಜಯ ಸ್ವಾಮೀಜಿ ಗಡುವು ನೀಡಿದ್ದರು. ಈ ಗಡುವು ಮುಕ್ತಾಯಗೊಂಡಿದ್ದು, ಇಂದು ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮಧ್ಯಾಹ್ನ ಒಂದು ಗಂಟೆಗೆ ಸಚಿವ ಸಂಪುಟ ಸಭೆಯಿದ್ದು, ಅದರಲ್ಲಿ ಪಂಚಮಸಾಲಿ ಮೀಸಲಾತಿಯ ಬಗ್ಗೆ ಸಿಎಂ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಶ್ರೀಗಳು ಡಿಸೆಂಬರ್ 19ರಿಂದ ಸವದತ್ತಿಯಿಂದ ಪಾದಯಾತ್ರೆ ಆರಂಭ ಮಾಡಿದ್ದಾರೆ. ಪಾದಯಾತ್ರೆ ಹಿರೇಬಾಗೇವಾಡಿ ತಲುಪಿದ್ದು, ಅಲ್ಲಿಂದಲೇ ಇಂದು ಪಾದಯಾತ್ರೆ ಆರಂಭವಾಗಲಿದೆ. ಬಳಿಕ ಸುವರ್ಣ ಸೌಧ ಬಳಿ ಇರುವ ರಾಘವೇಂದ್ರ ಲೇಔಟ್‌ನಲ್ಲಿ ಬೃಹತ್ ಪಂಚಲಕ್ಷ ವಿರಾಟ ಸಮಾವೇಶ ನಡೆಯಲಿದೆ.

ಪಂಚಮಸಾಲಿಗಳ ಸಮಾವೇಶ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಪ್ರತಿಭಟನೆ ಬಿಸಿ ತಟ್ಟಲಿದೆ.

ಈ ಹಿನ್ನೆಲೆಯಲ್ಲಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಕೇಶ್ವರ- ಎಂ.ಕೆ.ಹುಬ್ಬಳ್ಳಿ ಮಧ್ಯದವರೆಗೂ ಮಾರ್ಗ ಬದಲಾವಣೆ ಮಾಡಲಾಗಿದೆ.

ಕೊಲ್ಲಾಪುರದಿಂದ ಆಗಮಿಸುವ ವಾಹನಗಳು ಸಂಕೇಶ್ವರದಿಂದ- ಹುಕ್ಕೇರಿ- ಗೋಕಾಕ- ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ, ಹುಬ್ಬಳ್ಳಿ ಧಾರವಾಡದಿಂದ ಬರುವ ವಾಹನಗಳು ಎಂ.ಕೆ.ಹುಬ್ಬಳ್ಳಿ- ಬೈಲಹೊಂಗಲ- ನೇಸರಗಿ ಮಾರ್ಗವಾಗಿ ಬೆಳಗಾವಿ ನಗರಕ್ಕೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಿಸಿದ್ದಾರೆ.

SCROLL FOR NEXT