ರಾಜ್ಯ

ವಿಧಾನಸಭೆ: ಭೂಪರಿವರ್ತನೆ ಕಾಲಾವಧಿ ಏಳು ದಿನಗಳಿಗೆ ಇಳಿಕೆ ಮಸೂದೆ ಅಂಗೀಕಾರ

Shilpa D

ಬೆಳಗಾವಿ: ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ  ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿ ವಿಳಂಬ ತಪ್ಪಿಸುವ ಉದ್ದೇಶದ  ಕರ್ನಾಟಕ ಭೂಕಂದಾಯ (2ನೇ ತಿದ್ದುಪಡಿ) ಮಸೂದೆ -2022’ಕ್ಕೆ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರ ನೀಡಲಾಯಿತು.

ಕಂದಾಯ ಸಚಿವ ಆರ್‌.ಆಶೋಕ್‌ ಮಾತನಾಡಿ, ಕೃಷಿ ಭೂಮಿಯನ್ನು ಕೈಗಾರಿಕೆ, ವಾಣಿಜ್ಯ ಮತ್ತಿತರ ಕೃಷಿಯೇತರ ಉದ್ದೇಶಕ್ಕೆ  ಪರಿವರ್ತನೆ ಕೋರಿ ಅರ್ಜಿ ಸಲ್ಲಿಸಿದ 7 ದಿನಗಳ ಒಳಗೆ ಅನುಮೋದನೆ ನೀಡುವುದನ್ನು ಮಸೂದೆಯಲ್ಲಿ ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು.

ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳಿಗೆ ಅರ್ಹ ದಾಖಲೆ ಸಮೇತ ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಭೂ ಪರಿವರ್ತನಾ ಆದೇಶವಾಗದಿದ್ದರೆ ಅದು ತನ್ನಿಂದ ತಾನೇ (ಡೀಮ್ಡ್)ಭೂ ಪರಿವರ್ತನೆ ಆಗಿದೆ ಎಂದು ಭಾವಿಸಬೇಕಾಗುತ್ತದೆ ಅದಕ್ಕೆ ಈ ವಿಧೇಯಕ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಅಶೋಕ ವಿವರಿಸಿದರು.

ಇದು ಕೇವಲ ಯೋಜನಾ ಪ್ರಾಧಿಕಾರ ಹೊಂದಿರುವ ಪ್ರದೇಶಗಳಿಗೆ ಅನ್ವಯವಾಗಲಿದ್ದು,ಉಳಿದಂತೆ ಗ್ರಾಮೀಣ ಪ್ರದೇಶದಲ್ಲಿ ಒಂದು ತಿಂಗಳಿನ ಅವಧಿ ಮುಂದುವರೆಯಲಿದೆ ಎಂದು ಹೇಳಿದರು. ಎಚ್.ಕೆ.ಪಾಟೀಲ್,ಆರ್.ರಮೇಶ್‍ಕುಮಾರ್,ಶಿವಲಿಂಗೇಗೌಡ,ಅರವಿಂದ ಲಿಂಬಾವಳಿ ಸೇರಿದಂತೆ ಇನ್ನಿತರ ಕೆಲ ಸದಸ್ಯರ ಸಲಹೆ ಒಪ್ಪಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಯಿತು.

ಭೂಪರಿವರ್ತನೆಗೆ ಯೋಜನಾ ಪ್ರದೇಶಗಳ ವ್ಯಾಪ್ತಿಯಲ್ಲಿ 7 ದಿನಗಳ ಕಾಲಾವಕಾಶ ಹಾಗೂ ಗ್ರಾಮೀಣ ಭಾಗದಲ್ಲಿ 30 ದಿನಗಳ ಕಾಲಾವಕಾಶ ನಿಗದಿ ಮಾಡಲಾಗಿದೆ. ಮಸೂದೆಯನ್ನು ಪಕ್ಷಭೇದವಿಲ್ಲದೆ ಸದಸ್ಯರು ಸ್ವಾಗತಿಸಿದರು. ಜತೆಗೆ ಕೆಲವು ಸಲಹೆಗಳನ್ನೂ ನೀಡಿದರು. ಕಾಯಿದೆಗೆ ನಿಯಮಾವಳಿಗಳ ರಚನೆ ಸಂದರ್ಭದಲ್ಲಿ ಈ ಸಲಹೆಗಳನ್ನು ಪರಿಗಣಿಸುವುದಾಗಿ ಸಚಿವರು ಭರವಸೆ ನೀಡಿದರು.

SCROLL FOR NEXT