ರಾಜ್ಯ

ರಾಜ್ಯದ ಮೇಲೆ ಕೊರೋನಾ ತೂಗುಕತ್ತಿ: ಭಯ ಬೇಡ, ಎಚ್ಚರದಿಂದಿರಿ; ಜನತೆಗೆ ಸಿಎಂ ಬೊಮ್ಮಾಯಿ ಮನವಿ

Manjula VN

ಹುಬ್ಬಳ್ಳಿ: ಚೀನಾ ಮತ್ತು ಇತರ ಕೆಲವು ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ದೇಶದಾದ್ಯಂತ ಕೋವಿಡ್ ಕುರಿತು ಮತ್ತೆ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ಮನವಿ ಮಾಡಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆತಂಕ ಬೇಡ, ಎಚ್ಚರ ಹಾಗೂ ಜಾಗರೂಕರಾಗಿರುವಂತೆ ಶನಿವಾರ ಮನವಿ ಮಾಡಿಕೊಂಡಿದ್ದಾರೆ.

ಜನತಾ ದರ್ಶನದ ಅಂಗವಾಗಿ ಇಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಶಿಬಿರಗಳನ್ನು ಆಯೋಜಿಸಲಿದೆ ಎಂದು ಹೇಳಿದರು.

ನಾನು ಕಂದಾಯ ಸಚಿವ ಆರ್ ಅಶೋಕ ಮತ್ತು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರೊಂದಿಗೆ ಸಭೆ ನಡೆಸುತ್ತಿದ್ದೇನೆ. ಫಲಾನುಭವಿಗಳಿಗೆ ಬೂಸ್ಟರ್ ಡೋಸ್ ಸಿಗುವುದನ್ನು ಖಚಿತಪಡಿಸಿಕೊಳ್ಳಲು ದೊಡ್ಡ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ವಿವರಿಸಿದರು.

ಅನಾರೋಗ್ಯ ಪೀಡಿತರು ಮತ್ತು ತೀವ್ರ ಉಸಿರಾಟದ ಕಾಯಿಲೆ ಪ್ರಕರಣಗಳನ್ನು ಕೋವಿಡ್ -19 ಗಾಗಿ ಪರೀಕ್ಷಿಸಲಾಗುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರವು ಹೊಸ ವರ್ಷ ಆಚರಣೆಗೆ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಇದೇ ವೇಳೆ ಮುಖ್ಯಮಂತ್ರಿಗಳು ತಿಳಿಸಿದರು.

SCROLL FOR NEXT