ರಾಜ್ಯ

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಖನಿಜ ರಕ್ಷಣಾ ಪಡೆ ಸ್ಥಾಪನೆ : ಸಚಿವ ಹಾಲಪ್ಪ ಆಚಾರ್‌

Nagaraja AB

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ "ಖನಿಜ ರಕ್ಷಣಾ ಪಡೆ" ಯ ಗಸ್ತುವಾಹನಗಳಿಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ  ಸಚಿವ ಹಾಲಪ್ಪ ಆಚಾರ್‌  ಇಂದು ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ರಾಜ್ಯದ ಖನಿಜ ಸಂಪತ್ತನ್ನ ಸಂರಕ್ಷಿಸಿ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದು, ಪ್ರಪ್ರಥಮ ಬಾರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧೀನದಲ್ಲಿ ಪ್ರತಿ ಜಿಲ್ಲೆಯಲ್ಲಿ ಖನಿಜ ರಕ್ಷಣಾ ಪಡೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. 

ಮೊದಲ ಹಂತದಲ್ಲಿ 8 ಜಿಲ್ಲೆಗಳಲ್ಲಿ ಖನಿಜ ರಕ್ಷಣಾ ಪಡೆ ಅನುಷ್ಠಾನ - ನಿವೃತ್ತ ಸೈನಿಕರ ನೇಮಕ: ಮೊದಲ ಹಂತದಲ್ಲಿ ಖನಿಜ ರಕ್ಷಣಾ ಪಡೆ ಯನ್ನು ಹೆಚ್ಚಿನ ಖನಿಜ/ ಉಪ ಖನಿಜ ಗಣಿಗಾರಿಕೆ ಇರುವ 08 ಜಿಲ್ಲೆಗಳಾದ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಹಾವೇರಿ, ಬೆಳಗಾವಿ, ಕಲಬುರಗಿ, ಕೊಪ್ಪಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖನಿಜ ರಕ್ಷಣಾ ಪಡೆ ಸ್ಥಾಪಿಸಲು ಕ್ರಮವಹಿಸಲಾಗಿದೆ ಎಂದರು.

 ಖನಿಜ ರಕ್ಷಣಾ ಪಡೆ ಸಮರ್ಥವಾಗಿ ಕಾರ್ಯ ನಿರ್ವಹಿಸಲು  ಪ್ರತಿ ಜಿಲ್ಲೆಗೆ ಹವಾಲ್ದಾರ್‌ ದರ್ಜೆಯ 03 ನಿವೃತ್ತ ಸೈನಿಕರನ್ನು  ನೇಮಕಮಾಡಿಕೊಳ್ಳಲಾಗಿದೆ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ 44 ಹೊಸ ವಾಹನವನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. 

ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಖನಿಜ ರಕ್ಷಣಾ ಪಡೆಯನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ಹೇಳಿದರು.

SCROLL FOR NEXT