ರಾಜ್ಯ

ಸರ್ಕಾರ ನಮ್ಮಿಂದ ದುಪ್ಪಟ್ಟು ಆದಾಯ ಪಡೆಯುತ್ತಿದೆ: ಕ್ವಾರಿ ಮಾಲೀಕರು

Manjula VN

ಬೆಂಗಳೂರು: ಕರ್ನಾಟಕ ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದ ಒಕ್ಕೂಟದ 14,320 ಸದಸ್ಯರು ಮತ್ತು ಪ್ರತಿನಿಧಿಗಳು ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಸರ್ಕಾರ ನಮ್ಮಿಂದ ದುಪ್ಪಟ್ಟು ಆದಾಯ ಪಡೆಯುತ್ತಿದ್ದು, ನಮ್ಮಿಂದ ಹೆಚ್ಚುವರಿ ಹಣ ವಸೂಲಿ ಮಾಡಬಾರದು ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ಸಂದಾಯವಾಗುವ ರಾಜಧಾನ ಈಗಾಗಲೇ ಸಂದಾಯವಾಗಿದೆ. ಆದ್ದರಿಂದ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಬಾರದು. ಸರ್ಕಾರ ಕಳೆದ 40 ವರ್ಷಗಳಿಂದ ಇದನ್ನು ಮಾಡಿಕೊಂಡು ಬಂದಿದೆ. ಹೆಚ್ಚಿನ ಹಣವನ್ನು ಪಾವತಿಸಲು ದಂಡವನ್ನೇಕೆ ವಿಧಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಜನವರಿ ಮೊದಲ ವಾರದಲ್ಲಿ ‘ಬೆಂಗಳೂರು ಚಲೋ’ ಮೆರವಣಿಗೆ ನಡೆಸುವುದಾಗಿ ಇದೇ ವೇಳೆ ಬೆದರಿಕೆ ಹಾಕಿದರು.

ಈ ವೇಳೆ ಗಣಿ ಸಚಿವ ಹಾಲಪ್ಪ ಆಚಾರ್ ಪ್ರತಿಭಟನಾ ನಿರತರನ್ನು ಭೇಟಿ ಮಾಡಿ, ಬೇಡಿಕೆಗಳನ್ನು ಸರಕಾರದ ಮುಂದೆ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.

ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗಳ ಗಮನಕ್ಕೆ ತರಲಾಗಿದೆ. ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ಕಾರಣ ಸರ್ಕಾರ ಅಧಿವೇಶನದಲ್ಲಿ ನಿರತವಾಗಿದೆ. ಹೀಗಾಗಿ ಬೇಡಿಕೆಗಳಿಗೆ ಸ್ಪಂದಿಸಲು ಒಂದು ವಾರ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ.

ಈ ನಡುವೆ ಪ್ರತಿಭಟನಾನಿರತರು ರಾಜ್ಯದ ಅಧಿಕಾರಿಗಳು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ವಿಚಾರ ತರುವುದಾಗಿ ಎಚ್ಚರಿಸಿದ್ದಾರೆ.

ಕರ್ನಾಟಕ ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದ ಒಕ್ಕೂಟ ಪ್ರತಿಭಟನೆಯಿಂದಾಗಿ ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಬಹುದು ಎಂದು ರಾಜ್ಯ ಸರ್ಕಾರದ ಮೂಲಗಳು ಆತಂಕ ವ್ಯಕ್ತಪಡಿಸಿವೆ.

SCROLL FOR NEXT